ಟಿ20ಯಲ್ಲಿ ಶತಕ ಬಾರಿಸಿದವರು ಟೆಸ್ಟ್ ತಂಡಕ್ಕೆ ಆಯ್ಕೆ, ಟೆಸ್ಟ್ನಲ್ಲಿ ತ್ರಿಶತಕ ಬಾರಿಸಿದ ಆಟಗಾರ ಟಿ20 ತಂಡಕ್ಕೆ ಆಯ್ಕೆ!

ನೂತನ ಆಯ್ಕೆದಾರರ ಸಮಿತಿ ನ್ಯೂಜಿಲೆಂಡ್ ವಿರುದ್ಧದ ಟಿ20, ಏಕದಿನ ಮತ್ತು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಘೋಷಣೆ ಮಾಡಿದೆ.
ವಜಾಗೊಂಡಿದ್ದ ಚೇತನ್ ಶರ್ಮಾ ಮತ್ತೆ ಆಯ್ಕೆದಾರರ ಸಮಿತಿಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಹೊಸ ಆಯ್ಕೆದಾರರ ಸಮಿತಿ ಮೊದಲ ಬಾರಿಗೆ ತಂಡವನ್ನು ಆಯ್ಕೆ ಮಾಡಿದೆ. ಆಯ್ಕೆ ಸಮಿತಿಯ ಕೆಲವು ನಿರ್ಧಾರಗಳು ಅಚ್ಚರಿ ಮೂಡಿಸುವಂತಿವೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿದ್ದರೂ, ಏಕದಿನ ಸರಣಿಯಲ್ಲಿ ಆಡುವ ಬಳಗದಲ್ಲಿ ಅವಕಾಶ ಪಡೆಯದ ಸೂರ್ಯಕುಮಾರ್ ಯಾದವ್ ಈಗ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಆಯ್ಕೆಯಾಗಿದ್ದಾರೆ.
ಟಿ20 ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಟಿ20 ಮಾದರಿಯಲ್ಲಿ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಏಕದಿನ ಸರಣಿಯಲ್ಲಿ ಅವರ ಪ್ರದರ್ಶನ ಅಷ್ಟೇನು ಉತ್ತಮವಾಗಿಲ್ಲದ ಕಾರಣದಿಂದಲೇ ಅವರನ್ನು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಹೊರಗಿಟ್ಟು, ಶ್ರೇಯಸ್ ಅಯ್ಯರ್ ಗೆ ಅವಕಾಶ ನೀಡಿದ್ದರು, ನಾಯಕ ರೋಹಿತ್ ಶರ್ಮಾ.

ಟೆಸ್ಟ್ ಕ್ರಿಕೆಟ್ನಲ್ಲಿ ಮಿಂಚ್ತಾರ ಸೂರ್ಯ?
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆಂದು ನಿರೀಕ್ಷೆ ಮಾಡಿದ್ದ ರಿಷಬ್ ಪಂತ್, ಸದ್ಯ ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತ ತಂಡಕ್ಕೆ ಟೆಸ್ಟ್ ಮಾದರಿಯಲ್ಲಿ ಪಂತ್ರಂತೆ ಅಟ್ಯಾಕಿಂಗ್ ಬ್ಯಾಟರ್ ಬೇಕಿದೆ. ಇದೇ ಕಾರಣಕ್ಕೆ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಅವಕಾಶ ಪಡೆದಿರಬಹುದು.
ರಣಜಿ ಪಂದ್ಯದಲ್ಲಿ ಕೂಡ ಸೂರ್ಯ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೆ, ಟೆಸ್ಟ್ ಕ್ರಿಕೆಟ್ ಆಡಲು ಆಸಕ್ತಿ ಹೊಂದಿರುವುದಾಗಿ ಅವರು ಹೇಳಿದ್ದರು. ಟಿ20 ಕ್ರಿಕೆಟ್ನಲ್ಲಿ ತೋರಿದ ಪ್ರದರ್ಶನವನ್ನೇ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಸುತ್ತಾರಾ ಎನ್ನುವುದು ಫೆಬ್ರವರಿ 9 ರ ನಂತರ ತಿಳಿಯಲಿದೆ.
ಭಾರತ ಕ್ರಿಕೆಟ್ ತಂಡದಲ್ಲಿ ಸಿಗದ ಅವಕಾಶ: ವಿದೇಶಿ ಲೀಗ್ಗಳಲ್ಲಿ ಆಡಲು ಮುಂದಾದ ಹಿರಿಯ ಆಟಗಾರ

ಪೃಥ್ವಿ ಶಾ ಟಿ20 ತಂಡಕ್ಕೆ ಆಯ್ಕೆ
ಮತ್ತೊಂದೆಡೆ ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ 383 ಎಸೆತಗಳಲ್ಲಿ 379 ರನ್ ಚಚ್ಚಿದ್ದ ಮುಂಬೈ ತಂಡದ ಪೃಥ್ವಿ ಶಾ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಹಲವು ಬಾರಿ ಉತ್ತಮ ಪ್ರದರ್ಶನ ನೀಡಿದ್ದರೂ, ಅದ್ಯಾಕೋ ಬಿಸಿಸಿಐ ಈ ಯುವ ಕ್ರಿಕೆಟಿಗನನ್ನು ಕಡೆಗಣಿಸುತ್ತಲೇ ಬಂದಿತ್ತು. ತ್ರಿಶತಕ ಬಾರಿಸಿ ಮಿಂಚಿದ ನಂತರ ಅವರನ್ನು ಕೊನೆಗೂ ಟಿ20 ತಂಡಕ್ಕೆ ಆಯ್ಕೆ ಮಾಡಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಸಿಡಿಸಿರುವ ಪೃಥ್ವಿ ಶಾರನ್ನು ಟಿ20 ತಂಡಕ್ಕೆ ಆಯ್ಕೆ ಮಾಡುವುದರ ಹಿಂದಿನ ಲೆಕ್ಕಾಚಾರದ ಬಗ್ಗೆ ಮಾಜಿ ಕ್ರಿಕೆಟಿಗರು ಕೂಡ ತಲೆಕೆಡಿಸಿಕೊಂಡಿದ್ದಾರೆ. ಇಶಾನ್ ಕಿಶನ್ರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿರುವ ಕ್ರಮವನ್ನು ಟೀಕಿಸಿರುವ ಹಲವರು, ಟೆಸ್ಟ್ ಸರಣಿಗೆ ಪೃಥ್ವಿ ಶಾರನ್ನು ಆಯ್ಕೆ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ದಿದ್ದಾರೆ.

ಏಕದಿನ ತಂಡಕ್ಕೆ ಭರತ್ ಆಯ್ಕೆ, ಜಗದೀಶನ್ ಕಡೆಗಣನೆ
ರಿಷಬ್ ಪಂತ್ ಬದಲಾಗಿ ತಂಡದಲ್ಲಿ ಕೆಎಸ್ ಭರತ್ ಮತ್ತು ಇಶಾನ್ ಕಿಶನ್ರನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿದೆ. ಆದರೆ, ಟೆಸ್ಟ್ ಸ್ಪೆಷಲಿಸ್ಟ್ ಕೆಎಸ್ ಭರತ್ರನ್ನು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆ ಮಾಡಿದ್ದಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವಿಜಯ್ ಹಜಾರೆ ಟೂರ್ನಿಯಲ್ಲಿ ದಾಖಲೆಗಳನ್ನು ನಿರ್ಮಿಸಿದ್ದ ತಮಿಳು ನಾಡು ಬ್ಯಾಟರ್ ಎನ್ ಜಗದೀಶನ್ ಮತ್ತು ಮಹಾರಾಷ್ಟ್ರದ ಋತುರಾಜ್ ಗಾಯಕ್ವಾಡ್ರನ್ನು ನಿರ್ಲಕ್ಷಿಸಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.
ಬಲಿಷ್ಠ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳು ಭಾರತಕ್ಕೆ ನಿಜವಾದ ಸವಾಲಾಗಿದ್ದು, ತಂಡದ ಬಲ, ದೌರ್ಬಲ್ಯಗಳ ಅನಾವರಣ ಈ ಎರಡು ಸರಣಿಗಳಲ್ಲಿ ಆಗುವುದಂತೂ ಸತ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications