ಕೊಹ್ಲಿ ನಾಯಕತ್ವ ಕಳೆದುಕೊಳ್ಳುವುದಕ್ಕೆ ಅಸಲಿ ಕಾರಣವೇನು ಎಂಬುದನ್ನು ಕೊನೆಗೂ ಬಿಚ್ಚಿಟ್ಟ ಗಂಗೂಲಿ

ಇತ್ತೀಚೆಗಷ್ಟೇ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ತನ್ನ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಸೋಲುವುದರ ಮೂಲಕ ಸೆಮಿಫೈನಲ್ ಹಂತವನ್ನು ಪ್ರವೇಶಿಸುವಲ್ಲಿ ವಿಫಲವಾಗಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿತ್ತು. ಹೀಗೆ ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಅಂತಿಮ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಆಡಿದ ಭಾರತ ಟ್ರೋಫಿ ಗೆಲ್ಲದೆ ಬರಿಗೈಯಲ್ಲಿ ತವರಿಗೆ ಹಿಂತಿರುಗಿತು.
ಹೌದು, ಈ ಬಾರಿಯ ಟಿ20 ವಿಶ್ವಕಪ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಆಡಿದ ಅಂತಿಮ ಐಸಿಸಿ ಟಿ ಟ್ವೆಂಟಿ ಟೂರ್ನಮೆಂಟ್ ಆಗಿತ್ತು. ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ಘೋಷಣೆಯೊಂದನ್ನು ಮಾಡಿದ್ದ ವಿರಾಟ್ ಕೊಹ್ಲಿ ಎಲ್ಲಾ ಆವೃತ್ತಿಗಳಲ್ಲಿಯೂ ನಾಯಕನಾಗಿ ತಂಡವನ್ನು ಮುನ್ನಡೆಸುವುದರಿಂದ ಒತ್ತಡ ಹೆಚ್ಚಾಗುತ್ತಿದೆ, ಹೀಗಾಗಿ ಭಾರತ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕತ್ವದತ್ತ ಹೆಚ್ಚಿನ ಗಮನ ಹರಿಸಲು ಮತ್ತು ತನ್ನ ವೈಯಕ್ತಿಕ ಪ್ರದರ್ಶನಕ್ಕೆ ಹೆಚ್ಚಿನ ಒತ್ತು ನೀಡಲು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ನಿರ್ಧಾರವನ್ನು ಕೈಗೊಂಡಿದ್ದರು. ವಿರಾಟ್ ಕೊಹ್ಲಿ ತಮ್ಮ ನಿರ್ಧಾರದಂತೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಮುಗಿದ ಬೆನ್ನಲ್ಲೇ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿದರು ಹಾಗೂ ರೋಹಿತ್ ಶರ್ಮಾ ನೂತನ ನಾಯಕನಾಗಿ ಆಯ್ಕೆಯಾದರು.
ಇಷ್ಟು ವಿದ್ಯಮಾನಗಳು ಜರುಗಿದ ನಂತರ ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡಾ ಕಳೆದುಕೊಳ್ಳಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತು. ಆದರೆ ಈ ಹಿಂದೆ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕತ್ವದತ್ತ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ಹೇಳಿಕೆ ನೀಡಿದ್ದರಿಂದ ಕೊಹ್ಲಿ ಯಾವುದೇ ಕಾರಣಕ್ಕೂ ಏಕದಿನ ತಂಡದ ನಾಯಕತ್ವವನ್ನು ತ್ಯಜಿಸುವುದಿಲ್ಲ ಎಂದು ಅಭಿಮಾನಿಗಳು ನಾಯಕತ್ವ ತ್ಯಜಿಸುವ ಸುದ್ದಿಯನ್ನು ತಳ್ಳಿ ಹಾಕಿದ್ದರು. ಆದರೆ ವಿರಾಟ್ ಕೊಹ್ಲಿ ಅಭಿಮಾನಿಗಳ ಈ ವಿಶ್ವಾಸಕ್ಕೆ ಡಿಸೆಂಬರ್ 8ರಂದು ಬಿಸಿಸಿಐ ಹೊರಡಿಸಿದ ಘೋಷಣೆ ತಣ್ಣೀರನ್ನು ಎರಚಿತು.
ಹೌದು, ಡಿಸೆಂಬರ್ 8ರಂದು ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ ಭಾರತ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂಬ ಸುದ್ದಿಯನ್ನು ಕೂಡ ಬಹಿರಂಗಪಡಿಸಿತು. ಹೀಗೆ ದಿಢೀರನೆ ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮಾಗೆ ಭಾರತ ಏಕದಿನ ತಂಡದ ನಾಯಕತ್ವವನ್ನು ವಹಿಸಿದ ನಿರ್ಧಾರದ ಕುರಿತು ಸಾಕಷ್ಟು ಗೊಂದಲ ಮತ್ತು ಪ್ರಶ್ನೆಗಳು ಹುಟ್ಟಿಕೊಂಡವು. ಬಿಸಿಸಿಐ ಬೇಕಂತಲೇ ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದೆ ಎಂಬ ಆರೋಪಗಳು ಕೂಡ ದೊಡ್ಡ ಮಟ್ಟದಲ್ಲಿಯೇ ಕೇಳಿಬಂದವು. ಇನ್ನು ಈ ರೀತಿ ಅನುಮಾನಗಳು ಉಂಟಾಗಲು ಕಾರಣ ಬಿಸಿಸಿಐ ದಿಢೀರನೆ ನಾಯಕತ್ವ ಬದಲಾಯಿಸಿದ್ದಕ್ಕೆ ಕಾರಣ ನೀಡದೇ ಇದ್ದದ್ದು. ಆದರೆ ಇದೀಗ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ಈ ಗಂಭೀರ ವಿಚಾರದ ಕುರಿತು ಮಾತನಾಡಿದ್ದು ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವ ಕಳೆದುಕೊಳ್ಳಲು ಅಸಲಿ ಕಾರಣವೇನು ಎಂಬುದನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ..

ಟಿ20 ನಾಯಕತ್ವದಿಂದ ಕೆಳಗಿಳಿಯಬೇಡಿ ಎಂದು ಕೊಹ್ಲಿ ಬಳಿ ಬಿಸಿಸಿಐ ಮನವಿ ಮಾಡಿತ್ತು ಎಂದ ಗಂಗೂಲಿ
ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡಿರುವುದರ ಕುರಿತು ಕೊನೆಗೂ ಮೌನ ಮುರಿದಿರುವ ಸೌರವ್ ಗಂಗೂಲಿ ಬಿಸಿಸಿಐ ಮೊದಲಿಗೆ ವಿರಾಟ್ ಕೊಹ್ಲಿ ಅವರ ಬಳಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯಬೇಡಿ ಎಂದು ಮನವಿ ಮಾಡಿಕೊಂಡಿತ್ತು ಎಂದಿದ್ದಾರೆ. ವಿರಾಟ್ ಕೊಹ್ಲಿ ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಕೈಗೊಂಡಾಗ ಬಿಸಿಸಿಐ ನಾಯಕತ್ವವನ್ನು ತ್ಯಜಿಸಬಾರದೆಂದು ಮನವಿ ಮಾಡಿತ್ತಂತೆ. ಆದರೆ ಬಿಸಿಸಿಐ ಮನವಿಗೆ ಕಿವಿಗೊಡದ ವಿರಾಟ್ ಕೊಹ್ಲಿ ಏಕದಿನ ಮತ್ತು ಟೆಸ್ಟ್ ತಂಡಗಳತ್ತ ಹೆಚ್ಚಿನ ಗಮನ ಹರಿಸುವ ಕಾರಣವನ್ನು ನೀಡಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ್ದರು.

ಟಿ ಟ್ವೆಂಟಿ ತಂಡದ ನಾಯಕನಾಗಿ ಮುಂದುವರಿಯಲು ಒಪ್ಪದ ಕೊಹ್ಲಿ ಏಕದಿನ ನಾಯಕತ್ವವನ್ನೂ ಕಳೆದುಕೊಂಡರು!
ಭಾರತ ಟಿ ಟ್ವೆಂಟಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯಬೇಡಿ ಎಂದು ಬಿಸಿಸಿಐ ಮನವಿ ಮಾಡಿದರೂ ಅದಕ್ಕೆ ವಿರಾಟ್ ಕೊಹ್ಲಿ ಒಪ್ಪಲಿಲ್ಲ. ಆದರೆ ಆಯ್ಕೆಗಾರರು ವೈಟ್ ಬಾಲ್ ಕ್ರಿಕೆಟ್ ಮಾದರಿಗಳಾದ ಟಿ ಟ್ವೆಂಟಿ ಮತ್ತು ಏಕದಿನ ಎರಡಕ್ಕೂ ಪ್ರತ್ಯೇಕ ನಾಯಕರು ಇರುವುದನ್ನು ಒಪ್ಪಲಿಲ್ಲ ಹಾಗೂ ಎರಡಕ್ಕೂ ಒಬ್ಬನೇ ನಾಯಕ ಇರಬೇಕು ಎಂಬ ಉದ್ದೇಶದಿಂದ ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ತಂಡಕ್ಕೂ ನಾಯಕನಾಗಿ ಆಯ್ಕೆ ಮಾಡಿದರು ಎಂದು ಗಂಗೂಲಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ್ದೇ ಈಗ ಭಾರತ ಏಕದಿನ ನಾಯಕತ್ವವನ್ನೂ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು ಎಂದು ಗಂಗೂಲಿ ತಿಳಿಸಿದ್ದಾರೆ.

ಈ ವಿಷಯದ ಕುರಿತಾಗಿ ಕೊಹ್ಲಿ ಜೊತೆ ಚರ್ಚಿಸಿದ್ದೇನೆ ಎಂದ ಗಂಗೂಲಿ
ಆಯ್ಕೆಗಾರರು ವೈಟ್ ಬಾಲ್ ಕ್ರಿಕೆಟ್ ತಂಡಗಳಿಗೆ ಓರ್ವನೇ ನಾಯಕನಿರಬೇಕು ಎಂದು ನಿರ್ಧಾರವನ್ನು ಕೈಗೊಂಡಾಗ ಓರ್ವ ಅಧ್ಯಕ್ಷನಾಗಿ ತಾನು ವಿಷಯವನ್ನು ವಿರಾಟ್ ಕೊಹ್ಲಿ ಜೊತೆ ಚರ್ಚಿಸಿರುವುದಾಗಿ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ರೋಹಿತ್ ಶರ್ಮಾರನ್ನು ನೂತನ ನಾಯಕನನ್ನಾಗಿ ಘೋಷಿಸುವ ಮುನ್ನ ಆಯ್ಕೆಗಾರರೂ ಕೂಡ ವಿರಾಟ್ ಕೊಹ್ಲಿ ಜೊತೆ ಚರ್ಚೆಯನ್ನು ನಡೆಸಿದ್ದರು ಎಂಬ ಸಂಗತಿಯನ್ನು ಕೂಡ ಗಂಗೂಲಿ ಬಿಚ್ಚಿಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications