ಟಿ20 ನಾಯಕತ್ವದಿಂದ ಕೆಳಗಿಳಿಯಬೇಡಿ ಎಂದು ಕೊಹ್ಲಿ ಬಳಿ ಬಿಸಿಸಿಐ ಮನವಿ ಮಾಡಿತ್ತು ಎಂದ ಗಂಗೂಲಿ
ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡಿರುವುದರ ಕುರಿತು ಕೊನೆಗೂ ಮೌನ ಮುರಿದಿರುವ ಸೌರವ್ ಗಂಗೂಲಿ ಬಿಸಿಸಿಐ ಮೊದಲಿಗೆ ವಿರಾಟ್ ಕೊಹ್ಲಿ ಅವರ ಬಳಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯಬೇಡಿ ಎಂದು ಮನವಿ ಮಾಡಿಕೊಂಡಿತ್ತು ಎಂದಿದ್ದಾರೆ. ವಿರಾಟ್ ಕೊಹ್ಲಿ ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಕೈಗೊಂಡಾಗ ಬಿಸಿಸಿಐ ನಾಯಕತ್ವವನ್ನು ತ್ಯಜಿಸಬಾರದೆಂದು ಮನವಿ ಮಾಡಿತ್ತಂತೆ. ಆದರೆ ಬಿಸಿಸಿಐ ಮನವಿಗೆ ಕಿವಿಗೊಡದ ವಿರಾಟ್ ಕೊಹ್ಲಿ ಏಕದಿನ ಮತ್ತು ಟೆಸ್ಟ್ ತಂಡಗಳತ್ತ ಹೆಚ್ಚಿನ ಗಮನ ಹರಿಸುವ ಕಾರಣವನ್ನು ನೀಡಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ್ದರು.
ಟಿ ಟ್ವೆಂಟಿ ತಂಡದ ನಾಯಕನಾಗಿ ಮುಂದುವರಿಯಲು ಒಪ್ಪದ ಕೊಹ್ಲಿ ಏಕದಿನ ನಾಯಕತ್ವವನ್ನೂ ಕಳೆದುಕೊಂಡರು!
ಭಾರತ ಟಿ ಟ್ವೆಂಟಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯಬೇಡಿ ಎಂದು ಬಿಸಿಸಿಐ ಮನವಿ ಮಾಡಿದರೂ ಅದಕ್ಕೆ ವಿರಾಟ್ ಕೊಹ್ಲಿ ಒಪ್ಪಲಿಲ್ಲ. ಆದರೆ ಆಯ್ಕೆಗಾರರು ವೈಟ್ ಬಾಲ್ ಕ್ರಿಕೆಟ್ ಮಾದರಿಗಳಾದ ಟಿ ಟ್ವೆಂಟಿ ಮತ್ತು ಏಕದಿನ ಎರಡಕ್ಕೂ ಪ್ರತ್ಯೇಕ ನಾಯಕರು ಇರುವುದನ್ನು ಒಪ್ಪಲಿಲ್ಲ ಹಾಗೂ ಎರಡಕ್ಕೂ ಒಬ್ಬನೇ ನಾಯಕ ಇರಬೇಕು ಎಂಬ ಉದ್ದೇಶದಿಂದ ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ತಂಡಕ್ಕೂ ನಾಯಕನಾಗಿ ಆಯ್ಕೆ ಮಾಡಿದರು ಎಂದು ಗಂಗೂಲಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ್ದೇ ಈಗ ಭಾರತ ಏಕದಿನ ನಾಯಕತ್ವವನ್ನೂ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು ಎಂದು ಗಂಗೂಲಿ ತಿಳಿಸಿದ್ದಾರೆ.
ಈ ವಿಷಯದ ಕುರಿತಾಗಿ ಕೊಹ್ಲಿ ಜೊತೆ ಚರ್ಚಿಸಿದ್ದೇನೆ ಎಂದ ಗಂಗೂಲಿ
ಆಯ್ಕೆಗಾರರು ವೈಟ್ ಬಾಲ್ ಕ್ರಿಕೆಟ್ ತಂಡಗಳಿಗೆ ಓರ್ವನೇ ನಾಯಕನಿರಬೇಕು ಎಂದು ನಿರ್ಧಾರವನ್ನು ಕೈಗೊಂಡಾಗ ಓರ್ವ ಅಧ್ಯಕ್ಷನಾಗಿ ತಾನು ವಿಷಯವನ್ನು ವಿರಾಟ್ ಕೊಹ್ಲಿ ಜೊತೆ ಚರ್ಚಿಸಿರುವುದಾಗಿ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ರೋಹಿತ್ ಶರ್ಮಾರನ್ನು ನೂತನ ನಾಯಕನನ್ನಾಗಿ ಘೋಷಿಸುವ ಮುನ್ನ ಆಯ್ಕೆಗಾರರೂ ಕೂಡ ವಿರಾಟ್ ಕೊಹ್ಲಿ ಜೊತೆ ಚರ್ಚೆಯನ್ನು ನಡೆಸಿದ್ದರು ಎಂಬ ಸಂಗತಿಯನ್ನು ಕೂಡ ಗಂಗೂಲಿ ಬಿಚ್ಚಿಟ್ಟಿದ್ದಾರೆ.