
ಕರಾಚಿ: ಶ್ರೀಲಂಕಾದ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ ವಿವಾದಾತ್ಮಕ ಹೇಳಿಕೆಗಾಗಿ ಸುದ್ದಿಯಲ್ಲಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ರಣತುಂಗ ಮಾಡಿರುವ ಕಾಮೆಂಟ್ ಈಗ ಬಹಳ ಚರ್ಚೆಯಾಗುತ್ತಿದೆ. ರಣತುಂಗ ಅವರ ಹೇಳಿಕೆಗೆ ಪಾಕಿಸ್ತಾನ ಮಾಜಿ ಕ್ರಿಕೆಟರ್ ದನೀಶ್ ಕನೇರಿಯಾ ತಿರುಗೇಟು ನೀಡಿದ್ದಾರೆ.
ಭಾರತ ತನ್ನ 'ಬಿ' ತಂಡವನ್ನು ಶ್ರೀಲಂಕಾಕ್ಕೆ ಕಳುಹಿಸುತ್ತಿದೆ. ಇದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ಗೆ ಅವಮಾನಕರ ಸಂಗತಿ ಎಂದು ರಣತುಂಗ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಭಾರತ ಶ್ರೀಲಂಕಾಕ್ಕೆ ಕಳುಹಿಸಿರುವುದು ದ್ವಿತೀಯ ದರ್ಜೆಯ ತಂಡವನ್ನಲ್ಲ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಒಂದು ತಂಡ ಈಗ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮೊದಲಾದ ಆಟಗಾರರಿದ್ದು, ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ತಂಡ ಸಿದ್ಧವಾಗಿದೆ. ಮತ್ತೊಂದು ತಂಡ ಶ್ರೀಲಂಕಾಕ್ಕೆ ಪ್ರವಾಸ ಹೋಗಿದ್ದು, ಈ ತಂಡಕ್ಕೆ ಶಿಖರ್ ಧವನ್ ನಾಯಕರಾಗಿದ್ದಾರೆ. ಈ ವಿಚಾರ ಮುಂದಿಟ್ಟುಕೊಂಡೇ ರಣತುಂಗ ಹೇಳಿಕೆ ನೀಡಿದ್ದರು.
"ಮಿಸ್ಟರ್ ರಣತುಂಗ ನೀವು ಸುದ್ದಿಯಲ್ಲಿರಬೇಕೆಂದು ಈ ರೀತಿಯ ಹೇಳಿಕೆ ನೀಡಿದ್ದೀರ. 50-60 ಪ್ರತಿಭಾವಂತ ಆಟಗಾರರಿರುವ ತಂಡವೆಂದರೆ ಅದು ಭಾರತ. ಹೀಗಾಗಿ ಅದು ಎರಡು ಬಲಿಷ್ಠ ತಂಡಗಳನ್ನು ಏಕಕಾಲಕ್ಕೆ ಕಣಕ್ಕಿಳಿಸಲು ಶಕ್ತವಾಗಿದೆ. ಇಂಥ ಹೇಳಿಕೆಗಳ ಅಗತ್ಯವಿಲ್ಲ. ರಣತುಂಗ ಪಾಠ ಕಲಿತಿದ್ದಾರೆ ಎಂದು ನನಗನ್ನಿಸುತ್ತಿದೆ ಅಥವಾ ಶ್ರೀಲಂಕಾವನ್ನು ಭಾರತ ಸುಲಭವಾಗಿ ಸದೆಬಡಿದಾಗ ಅವರಿಗೆ ಸಂಗತಿ ಅರ್ಥವಾಗಬಹುದು," ಎಂದು ಕನೇರಿಯಾ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.