ಜಕಾರ್ತಾ, ಆಗಸ್ಟ್ 19: ಇಂಡೋನೇಷ್ಯಾದ ಏಷ್ಯನ್ ಗೇಮ್ಸ್ ಈಜು ಸ್ಪರ್ಧೆಯಲ್ಲಿ ಭಾರತದ ಸಾಜನ್ ಪ್ರಕಾಶ್ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಇತ್ತ ಸಾಜನ್ ಈಜಿ ಫೈನಲ್ ಪ್ರವೇಶಿಸಿದ್ದರೆ, ಅತ್ತ ಇವರ ಕುಟುಂಬ ಕೇರಳದಲ್ಲಿ ಪ್ರವಾಹದ ಸಂಕಷ್ಟವನ್ನೆದುರಿಸುತ್ತಿದೆ!
ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮೊದಲ ಚಿನ್ನ ಗೆದ್ದ ಬಜರಂಗ್ ಪೂನಿಯಾ
ಭಾನುವಾರ (ಆಗಸ್ಟ್ 19) ನಡೆದ ಏಷ್ಯನ್ ಗೇಮ್ಸ್ ಈಜು ಸ್ಪರ್ಧೆಯ 200 ಮೀ. ಬಟರ್ ಫ್ಲೈ ವಿಭಾಗದಲ್ಲಿ ಸಾಜನ್ 1.58.12 ಸೆಕೆಂಡ್ ಕಾಲಾವಧಿಯೊಂದಿಗೆ ಮತ್ತು 100 ಮೀ. ಬ್ಯಾಕ್ ಸ್ಟ್ರೋಕ್ ನಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. ಇದೇ ವೇಳೆ ಅತ್ತ ಸಾಜನ್ ಅವರ ಕೇರಳ ರಾಜ್ಯ ಭೀಕರ ಮಳೆಯಿಂದಾಗಿ ಭಾಗಶಃ ಮುಳುಗಿದೆ.
ಕೇರಳದ ಇಡುಕ್ಕಿ ಜಿಲ್ಲೆಯವರಾದ ಸಾಜನ್ ಕ್ರೀಡಾಕೂಟಕ್ಕೆ ತೆರಳಿದ್ದರಿಂದ ಕೇರಳದಲ್ಲಿ ಸಂಭವಿಸಿದ್ದ ಅನಿರೀಕ್ಷಿತ ಪ್ರವಾಹದ ಬಗ್ಗೆ ಅವರಿಗೆ ಅರಿವಿರಲಿಲ್ಲ. ಕ್ರೀಡಾಕೂಟಕ್ಕೆ ತೆರಳಿರುವ ಮಗ ಇಲ್ಲಿಯ ಪರಿಸ್ಥಿತಿಗೆ ಅಘಾತಗೊಳ್ಳಬಹುದು, ಇದರಿಂದ ಸ್ಪರ್ಧೆಗೆ ತೊಂದರೆಯಾಗಬಹುದು ಎಂದು ಸಾಜನ್ ತಾಯಿಯೂ ಪ್ರವಾಹ ವಿಚಾರವನ್ನು ಮಗನಿಗೆ ತಿಳಿಸಿರಲಿಲ್ಲ.
#Swimming: Sajan Prakash qualifies for the Men's 200m butterfly final with an impressive performance in heat 2. #AsianGames2018 pic.twitter.com/OibL5Nen0n
— Badminton India (@BadmintonIndia) August 19, 2018
ಸಾಜನ್ ಗೆ ಶನಿವಾರ ತನ್ನ ರಾಜ್ಯದ ವಾಸ್ತವ ಸ್ಥಿತಿ ಅರಿವಿಗೆ ಬಂದಿದೆ. ತನ್ನ ಕುಟುಂಬದ ಬಗ್ಗೆ ನೆನೆದು ಸಂಕಟವೂ ಆಗಿದೆ. ಆದರೆ ಆ ಸಂಕಟವನ್ನು ಬದಿಗಿಟ್ಟು ಅವರು ಸ್ಪರ್ಧಿಸಿದ್ದಾರೆ. ಸ್ವತಃ ಸಾಜನ್ ಅವರೇ ಹೇಳುವಂತೆ ಅವರಿಗೀಗ ಅವರ ಕುಟುಂಬ ಎಲ್ಲಿದೆ, ಹೇಗಿದೆ ಅನ್ನೋದೇ ಗೊತ್ತಿಲ್ಲ.
'ನನಗಿನ್ನೂ ನನ್ನ ಕುಟುಂಬದವರು ಎಲ್ಲಿದ್ದಾರೋ ಹೇಗಿದ್ದಾರೋ ಎಂಬ ಬಗ್ಗೆ ಸುಳಿವಿಲ್ಲ. ಆದರೆ ಎಲ್ಲರೂ ತಿಳಿದಿರುವಂತೆ ನನ್ನವರು ಎಲ್ಲಾದರೂ ಸುರಕ್ಷಿತ ಸ್ಥಳದಲ್ಲಿರಬಹುದು ಎಂದು ನಾನು ಭಾವಿಸಿದ್ದೇನೆ. ಜೊತೆಗೆ ಅವರು ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಸಂದರ್ಶನವೊಂದರ ವೇಳೆ ಸಾಜನ್ ಹೇಳಿದರು.