
ರಾಜ್ಯಾದ್ಯಂತ ಕೊರೊನಾವೈರಸ್ ಎರಡನೇ ಅಲೆಯ ಪ್ರಭಾವ ಜೋರಾಗಿದ್ದು ಸೋಂಕು ತಗುಲಿದ ಹಲವಾರು ರೋಗಿಗಳು ಆಕ್ಸಿಜನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹ ಆಕ್ಸಿಜನ್ ಅಗತ್ಯವಿರುವ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಲಿಂಡರ್ ಪೂರೈಸುವುದರ ಮೂಲಕ ಕರ್ನಾಟಕದ ದಾವಣಗೆರೆ ಮೂಲದ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಹಬೀಬುನ್ನಿಸಾ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕೊರೊನಾ ಸೋಂಕಿತನಿಗೆ ಸಿಜಿ ಆಸ್ಪತ್ರೆಯಲ್ಲಿ ಬೆಡ್ ದೊರಕಿತ್ತು, ಆದರೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಇರಲಿಲ್ಲ. ಆಕ್ಸಿಜನ್ ಪೂರೈಸಲು ಏನು ಮಾಡಬೇಕೆಂದು ತಿಳಿಯದ ಕುಟುಂಬದವರಿಗೆ ನೆರವಾದ ಹಬೀಬುನ್ನಿಸಾ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಲಿಂಡರ್ ತಲುಪಿಸಿ ಆ ಸೋಂಕಿತನ ಪ್ರಾಣ ಉಳಿಸಿದ್ದಾರೆ ಹಾಗೂ ಇನ್ನೂ ನಾಲ್ಕು ಅಧಿಕ ಸಿಲಿಂಡರ್ಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.
19 ವರ್ಷದ ಹರೆಯದ ಹಬೀಬುನ್ನಿಸಾ ಮೊಹಮ್ಮದ್ ಜಬೀರ್ ಎಂಬ ಆಟೋ ಚಾಲಕನ ಪುತ್ರಿ ಹಾಗೂ ದಾವಣಗೆರೆ ಯೂತ್ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ. 'ಕೊರೊನಾ ಸಮಯದಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ, ನಾನು ಮಾಡುತ್ತಿರುವ ಈ ಸಹಾಯಕ್ಕೆ ಯೂತ್ ಕಾಂಗ್ರೆಸ್ ಹಣವನ್ನು ಒದಗಿಸುತ್ತಿದೆ ಮತ್ತು ನನ್ನ ತಂದೆ ಕೂಡ ಹಣ ನೀಡುತ್ತಿದ್ದಾರೆ. ಇದೇ ರೀತಿ ಯುವಕ, ಯುವತಿಯರು ಕಷ್ಟದಲ್ಲಿರುವ ಸೊಂಕಿತರಿಗೆ ಸಹಾಯ ಮಾಡಲು ಮುಂದೆ ಬರಬೇಕು' ಎಂದು ಹಬೀಬುನ್ನಿಸಾ ಹೇಳಿದ್ದಾರೆ.
ದಾವಣಗೆರೆಯ ಮಿಲ್ಲಟ್ ಕಾಲೇಜಿನಲ್ಲಿ ತನ್ನ ಅಂತಿಮ ವರ್ಷದ ಐಟಿಐ (ಎಲೆಕ್ಟ್ರಾನಿಕ್) ವ್ಯಾಸಂಗ ಮಾಡುತ್ತಿರುವ ಹಬೀಬುನ್ನಿಸಾ ಆಕ್ಸಿಜನ್ ಪೂರೈಕೆ ಮಾತ್ರವಲ್ಲದೆ ಉಚಿತ ಮಾಸ್ಕ್ ವಿತರಣೆ, ರಕ್ತದ ಅಗತ್ಯವಿರುವವರಿಗೆ ರಕ್ತ ಒದಗಿಸುವುದು ಹಾಗೂ ತೀರಾ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವ ಕೆಲಸ ಮಾಡುತ್ತಾ ಜನರ ಮನಸ್ಸನ್ನು ಗೆದ್ದಿದ್ದಾರೆ.