
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಫೆಬ್ರವರಿ 9ರಿಂದ ಆರಂಭವಾಗಲಿರುವ ಈ ಸರಣಿಗಾಗಿ ಆಸ್ಟ್ರೇಲಿಯಾ ತಮಡ ಈಗಾಗಲೇ ಭಾರತಕ್ಕೆ ಆಗಮಿಸಿದ್ದು ಅಭ್ಯಾಸದಲ್ಲಿ ನಿರತವಾಗಿದೆ. ಈ ಸರಣಿಯ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದು ಈ ಸರಣಿಗೆ ಟೀಮ್ ಇಂಡಿಯಾದ ಓರ್ವ ಆಟಗಾರ ಆಡಲು ಸಮರ್ಥನಾಗಿರುವುದು ಭಾರತ ತಂಡದ ದೃಷ್ಟಿಯಿಂದ ಬಹಳ ಮುಖ್ಯವಾಗುತ್ತದೆ ಎಂದಿದ್ದಾರೆ.
ಆಕಾಶ್ ಚೋಪ್ರ ಹೀಗೆ ಹೆಳಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಬಗ್ಗೆ. ಕಳೆದ ಏಷ್ಯಾಕಪ್ ಟೂರ್ನಿ ಸಂದರ್ಭದಲ್ಲಿ ಗಾಯಗೊಂಡಿದ್ದ ರವೀಂದ್ರ ಜಡೇಜಾ ಬಳಿಕ ಸುದೀರ್ಘ ಕಾಲ ವಿಶ್ರಾಂತಿಯನ್ನು ಪಡೆದುಕೊಂಡಿದ್ದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ. ಆದರೆ ರವೀಂದ್ರ ಜಡೇಜಾ ಅವರ ಫಿಟ್ನೆಸ್ ಬಗ್ಗೆ ಎನ್ಸಿಎಯಿಂದ ಗ್ರೀನ್ಸಿಗ್ನಲ್ ಪಡೆದು ಆಸಿಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ರವೀಂದ್ರ ಜಡೇಜಾ ಕಳೆದ ವಾರ ಸ್ಪರ್ಧಾತ್ಮಕ ಕ್ರಿಕೆಟ್ಗೆ ವಾಪಾಸಾಗಿದ್ದಾರೆ. ರಣಜಿ ಟೂರ್ನಿಯಲ್ಲಿ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ಪರವಾಗಿ ಆಡಿದ್ದಾರೆ. ಈ ಪಂದ್ಯದಲ್ಲಿ ಒಟ್ಟು ಏಳು ವಿಕೆಟ್ಗಳನ್ನು ಪಡೆದು ಮಿಂಚಿದ್ದಾರೆ ರವೀಂದ್ರ ಜಡೇಜಾ. ಈ ಮೂಲಕ ಟೆಸ್ಟ್ ಪಂದ್ಯಕ್ಕೆ ಬೇಕಾದ ಫಿಟ್ನೆಸ್ ತನ್ನಲ್ಲಿದೆ ಎಂಬುದನ್ನು ಸಾರಿದ್ದಾರೆ.
"ರವೀಂದ್ರ ಜಡೇಜಾ ಟೆಸ್ಟ್ ಪಂದ್ಯಕ್ಕೆ ಲಭ್ಯವಿದ್ದಾರೆ. ಇತ್ತೀಚೆಗಷ್ಟೇ ಅವರು ರಣಜಿ ಪಂದ್ಯವನ್ನಾಡಿದ್ದು ಅಲ್ಲಿ ಸಾಕಷ್ಟು ವಿಕೆಟ್ಗಳನ್ನು ಪಡೆದಿದ್ದಾರೆ. ಈಗ ಅವರು ಭಾರತ ತಂಡದ ಭಾಗವಾಗಿದ್ದಾರೆ. ಜಡೇಜಾ ಅವರು ಫಿಟ್ ಆಗಿರುವುದು ಭಾರತ ತಂಡಕ್ಕೆ ಬಹಳ ಪ್ರಮುಖವಾಗಿದೆ. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ರಿಷಭ್ ಪಂತ್ ಲಭ್ಯವಿಲ್ಲ. ಶ್ರೇಯಸ್ ಐಯ್ಯರ್ ಕೂಡ ತಂಡದಲ್ಲಿರುವ ಸಾಧ್ಯತೆಯಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.
ಇನ್ನು ಈ ಸಂದರ್ಭದಲ್ಲಿ ಆಕಾಶ್ ಚೋಪ್ರ, ಶ್ರೇಯಸ್ ಐಯ್ಯರ್ ಬಗ್ಗೆಯೂ ಮಾತನಾಡಿದ್ದು ಐಯ್ಯರ್ ಫಿಟ್ ಆಗದಿದ್ದರೆ ಕೆಳಕ್ರಮಾಂಕ ದುರ್ಬಲವಾಗುವ ಸಾಧ್ಯತೆಯಿದೆ ಎಂದಿದ್ದಾರೆ. "ಶ್ರೇಯಸ್ ಐಯ್ಯರ್ ಲಭ್ಯವಾಗದಿದ್ದರೆ ಸೂರ್ಯಕುಮಾರ್ ಯಾದವ್ಗೆ ಅವಕಾಶ ದೊರೆಯಬಹುದು. ಆದರೆ ರವೀಂದ್ರ ಜಡೇಜಾ ಆಡದಿದ್ದರೆ ಕಳ ಕ್ರಮಾಂಕ ಸಾಕಷ್ಟು ದುರ್ಬಲವಾಗುವ ಸಾಧ್ಯತೆಯಿದೆ" ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ರವೀಂದ್ರ ಜಡೇಜಾ ಬೆಂಗಳೂರಿನ ಎನ್ಸಿಎಗೆ ತೆರಳಿ ಫಿಟ್ನೆಸ್ ಪರೀಕ್ಷೆಯ ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದಾರೆ. ಕಳೆದ ವರ್ಷದ ಜುಲೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಕೊನೆಯ ಬಾರಿಗೆ ಸುದೀರ್ಘ ಮಾದರಿಯಲ್ಲಿ ಜಡ್ಡು ಆಡಿದ್ದರು.