ಚೆನ್ನೈ, ಮಾರ್ಚ್ 30: ಮೈದಾನದಲ್ಲೇ ಆಗಲಿ, ಹೊರಗಡೆಯೇ ಆಗಲಿ ಸದಾ ಸ್ಥಿತ ಚಿತ್ತವಾಗಿರುವುದು ಮಹೇಂದ್ರ ಸಿಂಗ್ ಧೋನಿ ಅವರ ಹೆಚ್ಚುಗಾರಿಕೆ. ಆದರೆ ಅಂತಹಾ ಗಟ್ಟಿ ಮನಸ್ಸಿನ ಎಂ.ಎಸ್.ಧೋನಿ ಅವರು ಕೂಡಾ ಇಂದು ಭಾವುಕರಾದರು.
ಚೆನ್ನೈ ತಂಡದಿಂದ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ತಮ್ಮ ಸಹ ಆಟಗಾರರು ಮತ್ತು ಆಡಳಿತ ಮಂಡಳಿ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಚೆನ್ನೈ ತಂಡದ ಏಳು-ಬಿಳು, ತಂಡ ಎದುರಸಿದ ಸಂಘರ್ಷಗಳನ್ನು ನೆನದು ಧೋನಿ ಅವರು ಕ್ಷಣಕಾಲ ಭಾವುಕರಾದರು.
ಎರಡು ವರ್ಷ ನಿಷೇಧಕ್ಕೆ ಒಳಗಾಗಿದ್ದ ಸಿಎಸ್ಕೆ ತಂಡ ಈ ಬಾರಿ ಮತ್ತೆ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡುತ್ತಿದ್ದು, ಮೊದಲ ಪಂದ್ಯವು ಏಪ್ರಿಲ್ 7ರಂದು ಮುಂಬೈ ವಿರುದ್ಧ ನಡೆಯಲಿದೆ.
ಈಗ ಮತ್ತೆ ಚೆನ್ನೈ ತಂಡದ ಐಪಿಎಲ್ ಗೆ ಮರಳಿದ್ದು, ಈ ಬಗ್ಗೆ ಧೋನಿ ಭಾವುಕರಾಗಿ ಮಾತನಾಡಿದ್ದಾರೆ. ' ಇಷ್ಟು ದಿನ ನಾವು ಸವೆಸಿದ ಹಾದಿ ಕಠಿಣವಾಗಿತ್ತು' ಎಂದು ಮಾತು ಆರಂಭಿಸಿದ ಧೋನಿ ಮುಂದೆ ಮಾತನಾಡಲಾರದೆ ಕ್ಷಣ ಕಾಲ ಮೌನವಾದರು. ದುಖಃವನ್ನು ತಡೆದುಕೊಂಡು ಮತ್ತೆ ಮಾತು ಮುಂದುವರೆಸಿದ ಧೋನಿ, ಆಗಿದ್ದು ಆಗಿ ಹೋಗಿದೆ ಆದರೆ ಈಗ ನಾವು ಕ್ರೀಡಾ ತಂಡವಾಗಿ ವಾಪಾಸ್ಸು ಬಂದಿದ್ದೇವೆ, ಅದನ್ನೇ ಮುಂದುವರೆಯಬೇಕು ಅಷ್ಟೆ ಎಂದರು.
ಚೆನ್ನೈ ತಂಡದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಧೋನಿ ಹೊಸ ಹುರುಪಿನೊಂದಿಗೆ ನಾವು ಅಂಗಳಕ್ಕೆ ಇಳಿಯಬೇಕಿದೆ ಎಂದರು.
ಸಿಎಸ್ಕೆ ತಂಡದ ಮುಖ್ಯ ಆಡಳಿತಗಾರದ ಗುರುನಾಥ್ ಮೇಯಪ್ಪನ್ ಅವರು ಬೆಟ್ಟಿಂಗ್ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ಬಂದ ಕಾರಣ ಸಿಎಸ್ಕೆ ತಂಡದ ಮೇಲೆ ಎರಡು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು, ಆಗ ಧೋನಿ ಅವರ ಬಗ್ಗೆಯೂ ಕೂಡ ಅಪಸ್ವರಗಳು ಕೇಳಿಬಂದಿದ್ದವು.