ಕೊಲಂಬೋ, ಜುಲೈ 18: ಭಾರತ ಹಾಗೂ ಶ್ರಿಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವನ್ನು ಸಾಧಿಸಿದೆ. ಶಿಖರ್ ಧವನ್, ಇಶಾನ್ ಕಿಶನ್ ಹಾಗೂ ಪೃಥ್ವಿ ಶಾ ಬ್ಯಾಟಿಂಗ್ ಪರಾಕ್ರಮದಿಂದ ಭಾರತ ಇನ್ನೂ 13.2 ಓವರ್ಗಳು ಉಳಿದಿರುವಂತೆಯೇ ಗೆಲುವು ಸಾಧಿಸಿದೆ.
ಶ್ರೀಲಂಕಾ ನೀಡಿದ 263 ರನ್ಗಳ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಭಾರತಕ್ಕೆ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಸ್ಪೋಟಕ ಆರಂಭವನ್ನು ನೀಡಿದರು. ಮೊದಲ ವಿಕೆಟ್ಗೆ 58 ರನ್ಗಳ ಕೊಡುಗೆ ತಂಡಕ್ಕೆ ದೊರೆಯಿತು. ಇದರಲ್ಲಿ ಪೃಥ್ವಿ ಶಾ ಕೊಡುಗೆಯೇ 43 ರನ್ಗಳಿತ್ತು. ಬೌಂಡರಿ ಮೇಲೆ ಬೌಂಡರಿ ಬಾರಿಸಿದ ಪೃಥ್ವಿ ಶಾ 24 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ 43 ರನ್ ಬಾರಿಸಿದರು. ಧನಂಜಯ ಎಸೆತದಲ್ಲಿ ಎಡವಿದ ಶಾ ಕ್ಯಾಚ್ ನೀಡಿ ನಿರ್ಗಮಿಸಿದರು.
ನಂತರ ಬಂದ ಇಶಾನ್ ಕಿಶನ್ ಮೊದಲ ಎಸೆತದಿಂದಲೇ ಅಬ್ಬರಿಸಲು ಆರಂಭಿಸಿದರು. ಒಂದೆಡೆ ನಾಯಕ ಧವನ್ ತಳ್ಮೆಯ ಆಟವನ್ನು ಪ್ರದರ್ಶಿಸುತ್ತಿದ್ದರೆ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಾ ಸಾಗಿದರು. 42 ಎಸೆತಗಳನ್ನು ಎದುರಿಸಿದ ಇಶಾನ್ 59 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಚೊಚ್ಚಲ ಪಂದ್ಯವನ್ನು ಆಡಿದ ಇಶಾನ್ ಕಿಶನ್ ಅರ್ಧ ಶತಕವನ್ನು ಸಿಡಿಸಿ ಮಿಂಚಿದರು.
ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡ ನಂತರ ಶಿಖರ್ ಧವನ್ಗೆ ಮನೀಶ್ ಪಾಂಡೆ ಜೊತೆಯಾದರು. ಈ ಜೋಡಿ ಕೂಡ ಅರ್ಧ ಶತಕದ ಜೊತೆಯಾಟವನ್ನು ನೀಡಿ ಶ್ರೀಲಂಕಾಗೆ ಸಣ್ಣ ಮೇಲುಗೈ ಸಾಧಿಸುವುದಕ್ಕೂ ಅವಕಾಶವನ್ನು ನೀಡಲಿಲ್ಲ. ಮನೀಶ್ ಪಾಂಡೆ 26 ರನ್ಗಳಿಸಿ ವಿಕೆಟ್ ಕಳೆದುಕೊಂಡರು.
ನಂತರ ಸೂರ್ಯಕುಮಾರ್ ಯಾದವ್ ನಾಯಕನ್ನು ಸೇರಿಕೊಂಡರು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್ಗೆ ಗೆಲುವನ್ನು ಸಾರುವಲ್ಲಿ ಯಶಸ್ವಿಯಾದರು. ಭಾರತ ಶ್ರೀಲಂಕಾ ತಂಡ ನೀಡಿದ 263 ರನ್ಗಳ ಗುರಿಯನ್ನು ಇನ್ನೂ 80 ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿದೆ. ಈ ಮೂಲಕ ಪ್ರಮುಖ ಆಟಗಾರರಿಲ್ಲದಿದ್ದರೂ ಭಾರತ ಎಷ್ಟು ತಂಡದ ಸಾಮರ್ಥ್ಯ ಎಷ್ಟು ಪ್ರಬಲವಾಗಿದೆ ಎಂದು ಸಾರಿ ಹೇಳಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿತ್ತು. ನಿಗದಿತ 50 ಓವರ್ಗಳಲ್ಲಿ ಶ್ರೀಲಂಕಾ ತಂಡ 9 ವಿಕೆಟ್ ಕಳೆದುಕೊಂಡು 262 ರನ್ಗಳನ್ನು ಗಳಿಸಲು ಶಕ್ತವಾಯಿತು. ಭಾರತದ ಬೌಲಿಂಗ್ ಪಡೆ ಉತ್ತಮ ದಾಳಿಯನ್ನು ಸಂಘಟಿಸಿ ಶ್ರೀಲಂಕಾ ತಂಡಕ್ಕೆ ಆಘಾತವನ್ನು ನೀಡಿದರು. ಭಾರತದ ಪರವಾಗಿ ದೀಪಕ್ ಚಾಹರ್, ಯುಜುವೇಂದ್ರ ಚಾಹಲ್ ಹಾಗೂ ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಕಬಳಿಸಿದರೆ ಕೃನಾಲ್ ಪಾಂಡ್ಯ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಕಿತ್ತು ಮಿಂಚಿದರು.