
ಗಯಾನಾ, ಆಗಸ್ಟ್ 5: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ, ಆತಿಥೇಯರ ವಿರುದ್ಧ ಭಾನುವಾರ (ಆಗಸ್ಟ್ 4) ನಡೆದ 2ನೇ ಟಿ20 ಪಂದ್ಯದಲ್ಲಿ 22 ರನ್ ಗೆಲುವು (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಸಾಧಿಸಿದೆ. 3 ಪಂದ್ಯಗಳ ಟಿ20 ಸರಣಿಯನ್ನು ಭಾರತ 2-0ಯಿಂದ ಗೆದ್ದುಕೊಂಡಿದೆ.
3ನೇ ಮತ್ತು ಕೊನೇ ಪಂದ್ಯ ಭಾರತದ ಪಾಲಿಗೆ ಔಪಚಾರಿಕವಾದ್ದರಿಂದ ಗಯಾನದ ಪ್ರಾವಿಡೆನ್ಸ್ನಲ್ಲಿ ಆಗಸ್ಟ್ 6ರಂದು ನಡೆಯಲಿರುವ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಪ್ರಾಯೋಗಿಕ ಬದಲಾವಣೆಗಳಾಗಲಿವೆ. ತಂಡ ನಾಯಕ ವಿರಾಟ್ ಕೊಹ್ಲಿ ಇದರ ಸುಳಿವು ನೀಡಿದ್ದಾರೆ.
2ನೇ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, 'ಪಂದ್ಯ ಗೆಲ್ಲೋದು ಯಾವತ್ತಿಗೂ ನಮ್ಮ ಮೊದಲ ಆದ್ಯತೆ. ಆದರೆ ಸರಣಿ ಜಯಿಸಿರುವುದರಿಂದ ತಂಡದಲ್ಲಿ ಹೊಸಬರನ್ನು ತರಲು ನಮಗೆ ಅವಕಾಶ ಲಭಿಸಿದೆ. ಆದರೆ ಇಲ್ಲೂ ನಮ್ಮ ಯೋಜನೆ ಗೆಲ್ಲೋದೇ ಆಗಿದೆ,' ಎಂದರು.
ಕೊಹ್ಲಿ ಹೇಳಿರುವ ಪ್ರಕಾರ ಗಯಾನ ಪಂದ್ಯದಲ್ಲಿ ಯುವ ಬ್ಯಾಟ್ಸ್ಮನ್ ಶ್ರೇಯಸ್ ಐಯ್ಯರ್, ಲೆಗ್ ಬ್ರೇಕ್ ಬೌಲರ್ ರಾಹುಲ್ ಚಾಹರ್ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ರಾಹುಲ್ ಬದಲು ಅವರ ಸಹೋದರ ದೀಪಕ್ ಚಾಹರ್, ಆಡುವ 11ರಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.
ಧೋನಿ ಅಲಭ್ಯತೆ ರಿಷಬ್ ಪಂತ್ ಮಿಂಚಲು ಅವಕಾಶ ಒದಗಿಸಿತ್ತು. ಆದರೆ ಪಂತ್ 2 ಪಂದ್ಯಗಳಲ್ಲಿ ಕ್ರಮವಾಗಿ 0, 4 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಪಂತ್ ವಿಕೆಟ್ ಕೀಪರ್ ಜವಾಬ್ದಾರಿಯಲ್ಲಿರುವುದರಿಂದ 3ನೇ ಪಂದ್ಯದಲ್ಲಿ ಪಂತ್ ಆಡಿದರೂ ಮನೀಷ್ ಪಾಂಡೆ ಬದಲಿಗೆ ಕೆಎಲ್ ರಾಹುಲ್ ಕಾಣಿಸಿಕೊಳ್ಳಬಹುದು. ಅಥವಾ ರಾಹುಲ್, ಪಾಂಡೆ ತಂಡದಲ್ಲಿದ್ದು ಪಂತ್ ತಂಡದಿಂದ ಹೊರಗುಳಿಯಲೂಬಹುದು.