ಐಪಿಎಲ್ 2022 ಟೂರ್ನಿಯ ಹಾಟ್ ಫೇವರೇಟ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಕೆಟ್ಟ ಆರಂಭ ಪಡೆದುಕೊಂಡಿದೆ. ಕಳೆದ ಐಪಿಎಲ್ನಲ್ಲಿ ಚಾಂಪಿಯನ್ ಎನಿಸಿಕೊಂಡಿದ್ದ ಈ ತಂಡ ಈ ಟೂರ್ನಿಯಲ್ಲಿ ಆಡಿದ ಮೊದಲ ಮೂರು ಪಂದ್ಯಗಳನ್ನು ಸೋತಿದೆ.
ಇಷ್ಟು ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದು, ಆಲ್ರೌಂಡರ್ ರವೀಂದ್ರ ಜಡೇಜಾ ತಂಡ ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ನಾಯಕತ್ವ ಬದಲಾದ ಬೆನ್ನಲ್ಲೆ ತಂಡವು ಸತತ ಮೂರು ಪಂದ್ಯ ಸೋತಿರುವುದರಿಂದ ತಂಡದ ಹೊಸ ನಾಯಕನ ಮೇಲೆ ಟೀಕಾಪ್ರಹಾರವೇ ನಡೆಯುತ್ತಿದೆ.
ಮಾಜಿ ಕ್ರಿಕೆಟಿಗ, ಚೆನ್ನೈ ತಂಡದಲ್ಲಿಯೂ ಆಡಿದ್ದ ಹರ್ಬಜನ್ ಸಿಂಗ್, ರವೀಂದ್ರ ಜಡೇಜಾರ ನಾಯಕತ್ವದ ಬಗ್ಗೆ ವಿಮರ್ಶೆ ಮಾಡಿದ್ದು, ''ಜಡೇಜಾ ಮುಂದೆ ಬಂದು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ಅವರು ನಾಯಕತ್ವದ ಜವಾಬ್ದಾರಿಯನ್ನು ಬಹುಪಾಲು ಧೋನಿ ಹೆಗಲಿಗೆ ವರ್ಗಾಯಿಸಿದ್ದಾರೆ'' ಎಂದಿದ್ದಾರೆ ಭಜ್ಜಿ.
''ಚೆನ್ನೈ ಪಂದ್ಯ ನೋಡುವಾಗ ಈಗಲೂ ಎಂಎಸ್ ಧೋನಿಯೇ ನಾಯಕ ಎನಿಸುತ್ತಾರೆ. ರವೀಂದ್ರ ಜಡೇಜಾ 30 ಯಾರ್ಡ್ ರಿಂಗ್ನಿಂದ ಹೊರಗೆ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿರುತ್ತಾರೆ. ಈ ರೀತಿ ನಡೆದುಕೊಂಡರೆ ತಂಡದ ಮೇಲೆ ನಿಯಂತ್ರಣ ಪಡೆಯಲು ಸಾಧ್ಯವಿಲ್ಲ. ಜಡೇಜಾ, ಎಂಎಸ್ ಧೋನಿ ಮೇಲೆ ಹೆಚ್ಚಿನ ತೂಕ ಹಾಕಿದ್ದಾರೆ. ಸ್ವತಃ ತಮ್ಮ ತೂಕವನ್ನೂ ಅವರು, ಧೋನಿ ಮೇಲೆಯೇ ಹಾಕಿದ್ದಾರೆ'' ಎಂದಿದ್ದಾರೆ ಹರ್ಭಜನ್ ಸಿಂಗ್.
''ಪಂದ್ಯ ನಡೆಯುವಾಗ ಎಂಎಸ್ ಧೋನಿಯೇ ಫೀಲ್ಡಿಂಗ್ ಸೆಟ್ ಮಾಡುತ್ತಿರುತ್ತಾರೆ. ಬೌಲರ್ಗಳಿಗೆ ಸಲಹೆ ನೀಡುತ್ತಿರುತ್ತಾರೆ, ವಿರಾಮದ ಸಮಯದಲ್ಲಿ ತಂಡದೊಂದಿಗೆ ಯೋಜನೆ ರೂಪಿಸುತ್ತಿರುತ್ತಾರೆ'' ಎಂದಿದ್ದಾರೆ.
ಮುಂದುವರೆದು, ಜಡೇಜಾ ಬಗ್ಗೆ ಒಳ್ಳೆಯ ಮಾತುಗಳನ್ನೂ ಆಡಿರುವ ಭಜ್ಜಿ, ''ಸಿಎಸ್ಕೆ ನಾಯಕತ್ವ ವಹಿಸಿಕೊಳ್ಳಲು ಜಡೇಜಾ ಸೂಕ್ತ ವ್ಯಕ್ತಿ. ಸಿಎಸ್ಕೆ ತಂಡವು ಜಡೇಜಾ ಮೇಲೆ ನಂಬಿಕೆ ಇಡಬಹುದು. ಅವರಲ್ಲಿ ಶಕ್ತಿಯಿದೆ. ಎಂಎಸ್ ಧೋನಿ ನೆರಳಲ್ಲಿ ಅವರ ನಾಯಕತ್ವ ಇನ್ನಷ್ಟು ಹೊಳೆಯಲಿದೆ'' ಎಂದಿದ್ದಾರೆ.
''ಜಡೇಜಾ ಅದ್ಭುತವಾದ ಆತ್ಮವಿಶ್ವಾಸವುಳ್ಳ ವ್ಯಕ್ತಿ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಆಗಲಿ ಮೂರೂ ವಿಭಾಗದ ಮೇಲೆ ಅವರಿಗೆ ಹಿಡಿತ ಇದೆ. ಆದರೆ ಈಗ ಸಿಎಸ್ಕೆ ಈ ಮೂರು ವಿಭಾಗದಲ್ಲಿ ಸೂಕ್ತ ಪ್ರದರ್ಶನ ತೋರುತ್ತಿಲ್ಲ. ಈ ಸಮಯದಲ್ಲಿ ಅವರು ಮುಂದಾಳತ್ವ ವಹಿಸಿ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಕೆಲವರೊಟ್ಟಿಗೆ ಮಾತನಾಡಿ, ಕೆಲವು ವಿಷಯಗಳನ್ನು ಸರಿಪಡಿಸಿಕೊಳ್ಳಬೇಕಿದೆ'' ಎಂದಿದ್ದಾರೆ.
ಐಪಿಎಲ್ 2022 ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಈವರೆಗೆ ಮೂರು ಪಂದ್ಯಗಳನ್ನಾಡಿದೆ. ಮೊದಲ ಪಂದ್ಯವನ್ನು ಕೆಕೆಆರ್ ಎದುರು ಆಡಿ ಆರು ವಿಕೆಟ್ಗಳ ಅಂತರದಿಂದ ಸೋತಿತು. ಎರಡನೇ ಪಂದ್ಯವನ್ನು ಲಖನೌ ಎದುರು ಆಡಿ ಆರು ವಿಕೆಟ್ಗಳ ಸೋಲನುಭವಿಸಿತ್ತು. ಮೂರನೇ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಇಲೆವೆನ್ ವಿರುದ್ಧ ಆಡಿ 54 ರನ್ಗಳಿಂದ ಸೋಲನುಭವಿಸಿದೆ. ಚೆನ್ನೈನ ನಾಲ್ಕನೇ ಪಂದ್ಯವು ಏಪ್ರಿಲ್ 09 ರಂದು ಹೈದರಾಬಾದ್ ವಿರುದ್ಧ ಇದೆ.