ಬೆಂಗಳೂರು, ಜೂ.12: ಕುಂದಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಕನಸು ಕೊನೆಗೂ ನನಸಾಗಿದೆ. ಕ್ರಿಕೆಟ್ ಲೋಕದ ದಿಗ್ಗಜ ರಾಹುಲ್ ದ್ರಾವಿಡ್ ಅವರ ಜೊತೆ ಶಾಲಾ ಮಕ್ಕಳು ಆಡಿ ನಲಿದಿದ್ದಾರೆ. ಮಾಜಿ ಕ್ರಿಕೆಟ್ ನಾಯಕನೊಂದಿಗೆ ಚರ್ಚಿಸಿದ್ದಾರೆ, ಕ್ರಿಕೆಟ್ ಆಡಿದ್ದಾರೆ, ಜೀವನದ ಅತ್ಯಂತ ಅವಿಸ್ಮರಣೀಯ ದಿನ ಕಂಡಿದ್ದಾರೆ.
ನಗರದ ಕುಂದಲಹಳ್ಳಿಯ ಸರ್ಕಾರಿ ಶಾಲೆಯನ್ನು ಪಿ ಅಂಡ್ ಜಿ ಶಿಕ್ಷಾ ಯೋಜನೆ ಅಡಿಯಲ್ಲಿ ದತ್ತು ಪಡೆದಿರುವ ದ್ರಾವಿಡ್ ಅವರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ. Padhega India, Badhega India ಎಂಬ ಧ್ಯೇಯ ವಾಕ್ಯ ಆಶಯ ಹೊಂದಿರುವ ಪಿ ಅಂಡ್ ಜಿ ಶಿಕ್ಷಾ ಯೋಜನೆ ಬಗ್ಗೆ ಮಕ್ಕಳಿಗೆ ದ್ರಾವಿಡ್ ತಿಳಿ ಹೇಳಿದರು. [ಟೀಂ ಇಂಡಿಯಾ ಕೋಚ್ ಆಗುವ ಆಕಾಂಕ್ಷೆ ಇಲ್ಲ: ದ್ರಾವಿಡ್]
ಶಿಕ್ಷಣದ ಮಹತ್ವ, ತಾಳ್ಮೆ, ಶಿಸ್ತಿನ ಬಗ್ಗೆ ದ್ರಾವಿಡ್ ರಿಂದ ಪಾಠ ಕಲಿತ ಮಕ್ಕಳು ನಂತರ ಕ್ರಿಕೆಟ್ ಆಡಿದರು. ದ್ರಾವಿಡ್ ಅವರ ಬಾಲ್ಯದ ಶಿಕ್ಷಣ, ಶಾಲೆ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಕೆಲವರು ದ್ರಾವಿಡ್ ರಂತೆ ಬ್ಯಾಟಿಂಗ್ ಮಾಡುವ ಮಿಮಿಕ್ರಿ ಮಾಡಿದರು. ಒಟ್ಟಾರೆ ದ್ರಾವಿಡ್ ಜೊತೆ ಸಂತಸದ ಕ್ಷಣಗಳನ್ನು ಕಂಡರು.
ಸರ್ಕಾರಿ ಶಾಲಾ ಮಕ್ಕಳಿಗೆ ರಾಹುಲ್ ದ್ರಾವಿಡ್ ಅವರು ಬ್ಯಾಟ್ ಉಡುಗೊರೆಯಾಗಿ ನೀಡಿದರು. ಸರ್ಕಾರಿ ಶಾಲೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಬದಲಿಸಲು ಪಿಜಿ ಶಿಕ್ಷಾ ಸಂಸ್ಥೆ, 11 ವರ್ಷದಿಂದ ಶ್ರಮಿಸುತ್ತಿದೆ.
19 ವಯೋಮಿತಿಯ ಕ್ರೀಡಾಪಟುಗಳಿಗೆ ಉತ್ತಮವಾಗಿ ತರಬೇತಿ ನೀಡಲಾಗುವುದು, ಭಾರತ ಎ ಹಾಗೂ ಅಂಡರ್ 19 ತಂಡಕ್ಕೆ ಕೋಚ್ ಆಗಿರುವುದು ಸಂತಸದ ವಿಷಯ. ಬಾಂಗ್ಲಾ ಪ್ರವಾಸದಲ್ಲಿ ಕೊಹ್ಲಿ ನಾಯಕತ್ವದಲ್ಲಿ ತಂಡ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ. ಕೋಚ್ ಆಗಿ ರವಿಶಾಸ್ತ್ರಿ ಅವರೇ ಪೂರ್ಣಾವಧಿಗೆ ಮುಂದುವರೆದರೆ ಒಳ್ಳೆಯದು ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.