
ಲಂಡನ್, ಜೂನ್ 10: ಪ್ರತಿಭಾವಂತನೊಬ್ಬನ ಪ್ರತಿಭೆ ಸೂಕ್ತ ವೇದಿಕೆಯಲ್ಲಿ ಅನಾವರಣಗೊಂಡಾಗಲೇ ಆತನ ಸಾಮರ್ಥ್ಯ ಏನೆಂಬುದು ಜಗತ್ತಿಗೆ ತಿಳಿಯುತ್ತದೆ. ನಿಮ್ಮಲ್ಲಿ ಎಷ್ಟೇ ಪ್ರತಿಭೆ, ಕೌಶಲಗಳಿದ್ದರೂ ಹಾಗೂ ನೀವೊಬ್ಬ ಸಾಧಕರಾಗಿದ್ದರೂ ಜೀವನದಲ್ಲಿ ಅವನ್ನು ಪರೀಕ್ಷೆಗೊಡ್ಡುವ ಬಹುದೊಡ್ಡ ಅವಕಾಶಗಳು ಎದುರಾದಾಗ ನೀವು ಸೋತರೆ ಅವೆಲ್ಲವುಗಳಿಗೆ ಯಾವುದೇ ಬೆಲೆ ಸಿಗದಂತಾಗುವುದು ಸಹ ಸತ್ಯವಾಗಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮೇಲಿನ ಮಾತನ್ನು ಗಣನೆಗೆ ತೆಗೆದುಕೊಂಡಲ್ಲಿ ಬಹುಶಃ ಶಿಖರ ಧವನ್ ಮಾತ್ರ ಎಂದಿಗೂ ಸೋಲೊಪ್ಪಿಕೊಳ್ಳದ ಸರದಾರನಾಗಿ ಕಾಣಿಸುತ್ತಾರೆ. ಮಾರ್ಚ್ 2013 ರಲ್ಲಿ ಮೊಹಾಲಿಯಲ್ಲಿ ತಮ್ಮ ಪ್ರಥಮ ಟೆಸ್ಟ್ ಆಟವಾಡಿದ ಧವನ್, ಆ ಪಂದ್ಯದಲ್ಲಿ ಅಮೋಘ ಅತಿ ವೇಗದ ಸೆಂಚುರಿ ಬಾರಿಸಿ ಎದುರಾಳಿ ಆಸ್ಟ್ರೇಲಿಯಾ ತಂಡವು 187 ರನ್ ಗಳಿಂದ ಸೋಲುವಂತೆ ಮಾಡಿದ್ದರು. ಇದರ ನಂತರ ಹಲವಾರು ಪಂದ್ಯಗಳಲ್ಲಿ ತಮ್ಮ ಪ್ರತಿಭೆಗೆ ತಕ್ಕದಾದ ಆಟವಾಡಿದ ಧವನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹು ಬೇಗನೆ ಭರವಸೆಯ ಕ್ರಿಕೆಟಿಗನಾಗಿ ಹೆಸರು ಮಾಡಿದರು. ಈ ವಿಶ್ವಕಪ್ ನಲ್ಲಿಯೂ ಅದೇ ರೀತಿಯ ಸಮಯೋಚಿತ ಆಟವನ್ನು ಅವರು ಮುಂದುವರಿಸಿದ್ದು ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದ್ದಾರೆ.
ಝಂಪಾ ಮೇಲೆ ಚೆಂಡು ವಿರೂಪ ಆರೋಪ: ತುಟಿ ಬಿಚ್ಚಿದ ಆ್ಯರನ್ ಫಿಂಚ್
ಈ ವಿಶ್ವಕಪ್ ಪಂದ್ಯಾವಳಿಯ ಮುನ್ನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ವಿಶ್ವಕಪ್ನ ಒಟ್ಟು 19 ಮ್ಯಾಚ್ಗಳಲ್ಲಿ ಧವನ್ 62.28 ಸರಾಸರಿಯ 1,121 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಅಮೋಘ 5 ಸೆಂಚುರಿ ಹಾಗೂ 4 ಹಾಫ್ ಸೆಂಚುರಿಗಳಿವೆ. ಎಡಗೈ ಬ್ಯಾಟ್ಸಮನ್ ಆಗಿರುವ ಧವನ್ ಭಾರತದ ಮಧ್ಯಕ್ರಮಾಂಕದಲ್ಲಿ ಇನ್ನೊಬ್ಬ ಬಲಗೈ ಆಟಗಾರ ರೋಹಿತ್ ಶರ್ಮಾ ಅವರೊಂದಿಗೆ ಅತ್ಯಂತ ಸೂಕ್ತ ಜೋಡಿ ಎನಿಸಿದ್ದಾರೆ. ಸೌಥಾಂಪ್ಟನ್ ಪಂದ್ಯದಲ್ಲಿ ಅಷ್ಟೊಂದು ಚೆನ್ನಾಗಿ ಆಟವಾಡಲು ಸಾಧ್ಯವಾಗದಿದ್ದರೂ ರವಿವಾರದ ಪಂದ್ಯದಲ್ಲಿ ಮಾತ್ರ ಧವನ್ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಂಡಕ್ಕೆ ಧಾರೆ ಎರೆದರು.
ವಿಶ್ವಕಪ್ 2019: ಕ್ರೀಡಾ ಸ್ಫೂರ್ತಿಯಿಂದ ವಿಶ್ವದ ಗಮನ ಸೆಳೆದ ಕಿಂಗ್ ಕೊಹ್ಲಿ
ಬಹಳ ಹಿಂದಿನಿಂದಲೂ ಭಾರತ ತಂಡವು ಸಾಮಾನ್ಯವಾಗಿ ಆರಂಭಿಕ ಆಟಗಾರರಿಂದಲೇ ಉತ್ತಮ ಅಡಿಪಾಯ ಹಾಕುವ ಪರಿಪಾಠ ಹೊಂದಿದೆ. ಅದರ ನಂತರ ಮಧ್ಯಮ ಕ್ರಮಾಂಕದ ಆಟಗಾರರು ಈ ಬುನಾದಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದರು. 20 ದಿನಗಳ ಹಿಂದೆ ವಿಶ್ವಕಪ್ ಆಟವಾಡಲು ಇಂಗ್ಲೆಂಡ್ಗೆ ಬಂದಿಳಿದ ಭಾರತ ತಂಡವು ತನ್ನ ಆರಂಭಿಕ ಆಟಗಾರರ ಮೇಲೆಯೇ ಅತಿ ಹೆಚ್ಚು ಭರವಸೆಯನ್ನಿಟ್ಟುಕೊಂಡು ಬಂದಿತ್ತು. ಆದರೂ ಎಲ್ಲ ಆಟಗಾರರು ಬಹುತೇಕ ಎಲ್ಲ ರೀತಿಯ ಪಂದ್ಯಾವಳಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದು ಗೊತ್ತೇ ಇದೆ.
ಸೌಥಾಂಪ್ಟನ್ ಪಂದ್ಯದಲ್ಲಿ ಸೌಥ್ ಆಫ್ರಿಕಾ ವಿರುದ್ಧ ರೋಹಿತ್ ಅಜೇಯ 122 ರನ್ ಸಿಡಿಸಿ ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ರೋಹಿತ್ಗೆ ತಾವೇನೂ ಕಮ್ಮಿ ಇಲ್ಲ ಎನ್ನುವಂತೆ ರವಿವಾರ ಆಟವಾಡಿದ ಶಿಖರ ಧವನ್, ಓವಲ್ ನಲ್ಲಿ ರೋಮಾಂಚಕ 117 ರನ್ ಬಾರಿಸಿ ಹಿಂದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 36 ರನ್ ಗಳಿಂದ ಸೋಲಿಸಲು ಕಾರಣರಾದರು.
ಧೋನಿ ಬೆಂಬಲಿಸಿ 'ಬಲಿದಾನ್ ಬ್ಯಾಡ್ಜ್' ಪ್ರದರ್ಶಿಸಿದ ಅಭಿಮಾನಿಗಳು!
ರವಿವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಗೆಲುವು ಹಲವಾರು ರೀತಿಗಳಲ್ಲಿ ಭಾರತಕ್ಕೆ ಮಹತ್ವದ್ದಾಗಿದೆ. ಲೀಗ್ ಪಂದ್ಯಗಳ ಆರಂಭದಲ್ಲಿಯೇ ಬಲಿಷ್ಠ ತಂಡಗಳನ್ನು ಎದುರಿಸುವ ಸವಾಲು ಹೊಂದಿರುವ ಭಾರತಕ್ಕೆ ಗೆಲುವಿನ ಸರಣಿ ನಿಲ್ಲಕೂಡದು. ಆರಂಭ ಉತ್ತಮವಾದಲ್ಲಿ ಮಾತ್ರ ಭಾರತ ಸೆಮಿ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಲು ಸಾಧ್ಯ. ಅದರಲ್ಲೂ ಬಹುತೇಕ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತದ ಓಟಕ್ಕೆ ಆಸ್ಟ್ರೇಲಿಯಾ ಕಡಿವಾಣ ಹಾಕುತ್ತಲೇ ಬಂದಿತ್ತು. ಈ ಹಿಂದೆ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಒಟ್ಟು 11 ಪಂದ್ಯಗಳಲ್ಲಿ ಭಾರತ 8 ಪಂದ್ಯಗಳನ್ನು ಸೋತಿದೆ ಎಂಬುದನ್ನು ಗಮನಿಸಿದರೆ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತದೆ.
ಇದು ಮಾತ್ರವಲ್ಲದೆ ಭಾರತದಲ್ಲಿಯೇ ನಡೆದ ಸರಣಿಯಲ್ಲಿ 0-2 ರಿಂದ ಹಿಂದಿದ್ದ ಆಸ್ಟ್ರೇಲಿಯಾ ನಂತರ ಚೇತರಿಸಿಕೊಂಡು 3-2 ಅಂತರದಲ್ಲಿ ಸರಣಿ ಗೆದ್ದುಕೊಂಡಿದ್ದು ಮರೆಯಲಾಗದು. ಹೀಗಾಗಿ ಈ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜವಾಬ್ದಾರಿಯುತ ಆಟಗಾರನೊಬ್ಬನ ಅವಶ್ಯಕತೆ ಇತ್ತು. ಇಂಥ ಪರಿಸ್ಥಿತಿಯಲ್ಲಿ ಭಾರತಕ್ಕೆ ಗೆಲುವಿನ ರೂವಾರಿಯಾದ ಶಿಖರ ಧವನ್ ಅವರನ್ನು ಎಷ್ಟು ಹೊಗಳಿದರೂ ಕಡಿಮೆಯೇ.
ದಾದಾ, ತೆಂಡೂಲ್ಕರ್ ಸಾಲಿಗೆ ಸೇರಿದ ಶತಕ ವೀರ ಶಿಖರ್ ಧವನ್!
ಹೊಸ ಚೆಂಡಿನೊಂದಿಗೆ ಆಕ್ರಮಣಕ್ಕಿಳಿದ ಪ್ಯಾಟ್ ಕಮಿನ್ಸ್ ಹಾಗೂ ಮಿಶೆಲ್ ಸ್ಟಾರ್ಕ್ ಅವರ ದಾಳಿಯೆದುರು ಆರಂಭದಲ್ಲಿ ಶಿಖರ ತಾಳ್ಮೆಯ ಆಟವನ್ನೇ ಆಡಿದರು. ಆದರೆ ಕೆಲ ಓವರುಗಳಲ್ಲಿಯೇ ಆಟಕ್ಕೆ ಕುದುರಿಕೊಂಡ ಧವನ್ ನಂತರ ಯಾವುದೇ ಮುನ್ಸೂಚನೆ ನೀಡದೆ ಬಾಲ್ ಚಚ್ಚಲಾರಂಭಿಸಿದರು. ನಾಥನ್ ಕೋಲ್ಟರ್ ಅವರ ಬಾಲ್ ಒಂದನ್ನು ಮಿಡ್ ಆಫ್ ಬೌಂಡರಿಗೆ ಅಟ್ಟುವ ಮೂಲಕ ಆಕ್ರಮಣಕಾರಿ ಆಟಕ್ಕಿಳಿದ ಅವರು, ನಂತರದ ಎರಡು ಎಸೆತಗಳನ್ನು ಸಹ ನಿರಾಯಾಸವಾಗಿ ಬೌಂಡರಿ ದಾಟಿಸಿದರು. ಈ ಮೂರು ಬೌಂಡರಿಗಳ ನಂತರ ಪ್ರೇಕ್ಷಕರ ಕರತಾಡನ ಎಲ್ಲೆಲ್ಲೂ ಮೊಳಗಲಾರಂಭಿಸಿತು.
ತಮ್ಮ ಶಕ್ತಿಗಿಂತ ಟೈಮಿಂಗ್ ಮೇಲೆ ಆಟವಾಡುವಾಗ ಧವನ್ ಅತ್ಯಂತ ಶ್ರೇಷ್ಠ ಆಟವಾಡುತ್ತಾರೆ. ರವಿವಾರದ ಆಟದಲ್ಲಿ ತಮ್ಮ ಅದ್ಭುತ ಹಾಗೂ ಕರಾರುವಾಕ್ ಟೈಮಿಂಗ್ ಆಟ ಪ್ರದರ್ಶಿಸಿದ ಅವರು ಎಲ್ಲರೂ ವಾಹ್ ಎನ್ನುವಂತೆ ಬ್ಯಾಟ್ ಬೀಸಿದರು. ಲೆಗ್ ಸ್ಪಿನ್ನರ್ ಆಡಮ್ ಝುಂಪಾ ಅವರನ್ನಂತೂ ಧವನ್ ಬಿಡದೆ ಸತಾಯಿಸಿದರು. ಬಹುತೇಕ ಎಲ್ಲ ಆಸ್ಟ್ರೇಲಿಯಾ ಬೌಲರಗಳ ಸ್ಥಿತಿ ಹೀಗೇ ಆಗಿತ್ತು. ವಿಶಾಲವಾದ ಮೈದಾನದಲ್ಲಿನ ಹೋರ್ಡಿಂಗ್ಗಳಿಗೆ ಅವರು ಚಚ್ಚಿದ ಬಾಲ್ಗಳು ಬಡಿಯುತ್ತಿದ್ದರೆ ಇತ್ತ ಭಾರತದ ಡ್ರೆಸಿಂಗ್ ರೂಂನಲ್ಲಿ ಇತರ ಆಟಗಾರರ ಹುಮ್ಮಸ್ಸು ಹೆಚ್ಚಾಗುತ್ತಿತ್ತು. ಇದರ ಜೊತೆಗೆ ಪ್ರೇಕ್ಷಕರಿಗೆ ಆಟದ ರಸದೌತಣ ಉಣಬಡಿಸಿತ್ತು.
ಆಸೀಸ್ ವಿರುದ್ಧ ವಿಶ್ವ ದಾಖಲೆ ಬರೆದ ಗಬ್ಬರ್-ಹಿಟ್ಮ್ಯಾನ್ ಜೋಡಿ!
ಒಂಭತ್ತನೇ ಓವರಿನಲ್ಲಿ ಕಮ್ಮಿನ್ಸ್ ಅವರ ಎಸೆತವೊಂದು ಶಿಖರ್ ಎಡಹೆಬ್ಬೆರಳಿಗೆ ಬಡಿದು ಸಾಕಷ್ಟು ನೋವಾದರೂ ಅದನ್ನು ಲೆಕ್ಕಿಸದೆ ಮತ್ತೆ ಮೈದಾನಕ್ಕಿಳಿದಿದ್ದು ಅವರ ಆಟವನ್ನು ಮತ್ತೂ ವಿಶೇಷವಾಗಿಸಿದೆ. ಗುರುವಾರ ನಾಟಿಂಗಹ್ಯಾಂ ನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆಗೆ ಅವರ ನೋವು ಸಂಪೂರ್ಣ ವಾಸಿಯಾಗಬಹುದಾಗಿದೆ.
(ಆರ್. ಕೌಶಿಕ್ ಓರ್ವ ಕ್ರಿಕೆಟ್ ಅಂಕಣಕಾರರಾಗಿದ್ದು, ಕಳೆದ ಎರಡು ದಶಕಗಳಿಂದ ಕ್ರೀಡೆಗಳನ್ನು ಹತ್ತಿರದಿಂದ ನೋಡುತ್ತ ಬಂದಿದ್ದಾರೆ. ಇದು ಅವರು ವರದಿ ಮಾಡುತ್ತಿರುವ 7ನೇ ವಿಶ್ವಕಪ್ ಆಗಿದೆ.)