ಪ್ರಕರಣದಲ್ಲಿ ಇಬ್ಬರು ಸಾವು
ಆಗಸ್ಟ್ 19ರಂದು ಪಠಾಣ್ಕೋಟ್ ಜಿಲ್ಲೆಯ ತರ್ಯಾಲ್ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಸುರೇಶ್ ರೈನಾ ಮಾವ ಅಶೋಕ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರ ಗಾಯಗೊಂಡಿದ್ದ ಅಶೋಕ್ ಕುಮಾರ್ ಅವರ ಪುತ್ರ ಕೌಶಲ್ ಕುಮಾರ್ ಆಗಸ್ಟ್ 31ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರೆ, ಪತ್ನಿ ಆಶಾ ರಾಣಿ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ಮುಂದುವರಿಯುತ್ತಿದೆ.
ಎಸ್ಐಟಿಯಿಂದ ತನಿಖೆ
ಪ್ರಕರಣದ ಬಳಿಕ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ತನಿಖೆಯನ್ನು ನಡೆಸುವಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆದೇಶಿಸಿದ್ದರು. ಬಾರ್ಡರ್ ರೇಂಜ್ ಐಜಿಪಿ ನೇತೃತ್ವದ ಎಸ್ಐಟಿ ತಂಡ ತನಿಖೆಯನ್ನು ನಡೆಸಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳು ಬಲೆಗೆ
ಪ್ರಕರಣ ನಡೆದ ದಿನ ಬೆಳಗ್ಗೆ ಡಿಫೆನ್ಸ್ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಮೂವರು ಶಂಕಿತರು ಸೆಪ್ಟೆಂಬರ್ 15ರಂದು ಪಠಾಣ್ಕೋಟ್ ರೈಲ್ವೆ ನಿಲ್ದಾಣದ ಬಳಿಯ ಸ್ಲಮ್ನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಎಸ್ಐಟಿಗೆ ಸಿಕ್ಕಿತು. ಈ ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿ ಮೂವರನ್ನೂ ಬಂಧಿಸಲಾಗಿದೆ. ಆರೋಪಿಗಳಿಂದ ಕೆಲ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.
ಧನ್ಯವಾದ ಸಲ್ಲಿಸಿದ ಸುರೇಶ್ ರೈನಾ
ಪೊಲೀಸರ ತಂಡ ಪ್ರಕರಣವನ್ನು ಬೇಧಿಸಿ 3 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸುರೇಶ್ ರೈನಾ ಪಂಜಾಬ್ ಪೊಲೀಸ್ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ. "ನಿಮ್ಮ ಪರಿಶ್ರಮ ನಿಜಕ್ಕೂ ಪ್ರಶಂಸೆಗೆ ಅರ್ಹವಾಗಿದೆ. ನಮ್ಮ ಕುಟುಂಬಕ್ಕೆ ಆದ ನಷ್ಟವನ್ನು ಭರಿಸಲು ಸಾಧ್ಯವಾಗದಿದ್ದರೂ ಮುಂದಿನ ಅಪರಾಧಗಳನ್ನು ತಡೆಯಲಿ ಇದರಿಂದ ಸಾಧ್ಯವಾಗುತ್ತದೆ. ಧನ್ಯವಾದಗಳು" ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ