ಬೇಕಿದ್ದರೆ ಅಫ್ಘಾನಿಸ್ತಾನಕ್ಕೆ ಸಹಾಯ ಮಾಡುತ್ತೇವೆ
"ಅಫ್ಘಾನಿಸ್ತಾನ ಉತ್ತಮ ಪ್ರದರ್ಶನ ನೀಡುತ್ತಿದ್ದು ಅವರ ಮೇಲೆ ಅನೇಕ ಭರವಸೆಗಳಿವೆ. ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಉತ್ತಮ ಪ್ರದರ್ಶನ ನೀಡಲಿ ಎಂದು ಆಶಿಸುತ್ತೇನೆ. ನ್ಯೂಜಿಲೆಂಡ್ ವಿರುದ್ಧ ಆಫ್ಘಾನಿಸ್ತಾನ ಗೆಲ್ಲಲು ಮುಜೀಬ್ ಉರ್ ರೆಹಮಾನ್ ಅಗತ್ಯತೆಯಿದ್ದು ಗಾಯದಿಂದ ಬಳಲುತ್ತಿರುವ ಅವರಿಗೆ ಬೇಕಿದ್ದರೆ ಟೀಮ್ ಇಂಡಿಯಾ ವತಿಯಿಂದ ವೈದ್ಯರನ್ನು ಕಳುಹಿಸಿ ಕೊಡುತ್ತೇವೆ. ಅದೊಂದೇ ನಾವು ಮಾಡಬಹುದಾದ ಸಹಾಯ, ಉಳಿದದ್ದು ನಮ್ಮ ಕೈಯಲ್ಲಿಲ್ಲ" ಎಂದು ರವಿಚಂದ್ರನ್ ಅಶ್ವಿನ್ ಹೇಳಿಕೆ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ಗೆಲ್ಲಲೇಬೇಕು!
ನವೆಂಬರ್ 7ರ ಭಾನುವಾರದಂದು ಮಧ್ಯಾಹ್ನ ವೇಳೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಆಫ್ಘಾನಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯಕ್ಕಾಗಿ ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ವೀಕ್ಷಕರು ಮಾತ್ರವಲ್ಲದೇ ಟೀಮ್ ಇಂಡಿಯಾ ಅಭಿಮಾನಿಗಳು ಕೂಡ ದೊಡ್ಡ ಮಟ್ಟದಲ್ಲಿ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ಜಯಗಳಿಸಿದರೆ ಟೀಮ್ ಇಂಡಿಯಾಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಲಭಿಸಲಿದೆ. ಒಂದುವೇಳೆ ನ್ಯೂಜಿಲೆಂಡ್ ಅಫ್ಘಾನಿಸ್ತಾನವನ್ನು ಸೋಲಿಸಿದರೆ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಆಡುವ ಮುನ್ನವೇ ಸೆಮಿಫೈನಲ್ ರೇಸ್ನಿಂದ ಅಧಿಕೃತವಾಗಿ ಹೊರಬೀಳಲಿದೆ.
ಅಫ್ಘಾನ್ ಗೆಲ್ಲುವುದು ಮಾತ್ರವಲ್ಲ, ಟೀಮ್ ಇಂಡಿಯಾ ನಮೀಬಿಯಾ ವಿರುದ್ಧ ದೊಡ್ಡ ಅಂತರದಲ್ಲಿ ಗೆಲ್ಲಬೇಕು
ಹೌದು, ಇಂಡಿಯಾ ಯಶಸ್ವಿಯಾಗಿ ಸೆಮಿಫೈನಲ್ ಪ್ರವೇಶಿಸಬೇಕೆಂದರೆ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲ್ಲುವುದು ಮಾತ್ರವಲ್ಲದೇ, ಸೋಮವಾರ ಟೀಮ್ ಇಂಡಿಯಾ ಮತ್ತು ನಮೀಬಿಯಾ ನಡುವೆ ನಡೆಯಲಿರುವ ಪಂದ್ಯದಲ್ಲಿ ಕೊಹ್ಲಿ ಪಡೆ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಾಗಿದೆ. ಹೀಗಾದರೆ ಮಾತ್ರ ಟೀಮ್ ಇಂಡಿಯಾ ದೊಡ್ಡ ನೆಟ್ ರನ್ ರೇಟ್ ಸಹಾಯದಿಂದ ಸೆಮಿಫೈನಲ್ ಪ್ರವೇಶಿಸಲಿದೆ.