
ಇಸ್ಲಮಾಬಾದ್: ಕ್ರೀಡೆಯಲ್ಲಿ, ಕ್ರಿಕೆಟ್ನಲ್ಲಿ ಪಾಕಿಸ್ತಾನ ದೇಶ ಭಾರತಕ್ಕೆ ಬದ್ಧ ಎದುರಾಳಿ ದೇಶ ಹೌದು. ಆದರೆ ಭಾರತೀಯರು ಮತ್ತು ಪಾಕಿಸ್ತಾನಿ ಕ್ರಿಕೆಟರ್ಗಳ ಮಧ್ಯೆ ದ್ವೇಷ ಭಾವನೆಯಿಲ್ಲ. ಬದಲಿಗೆ ಸ್ನೇಹ ಭಾವನೆಯಿದೆ ಅನ್ನೋದಕ್ಕೆ ಪಾಕಿಸ್ತಾನದ ಮಾಜಿ ಬೌಲಿಂಗ್ ಆಲ್ ರೌಂಡರ್ ವಾಸಿಂ ಅಕ್ರಮ್ ಸಾಕ್ಷಿ ಹೇಳಿದ್ದಾರೆ.
ಕೊರೊನಾವೈರಸ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ಗೆ ವಾಸಿಂ ಅಕ್ರಮ್ ವಿಶೇಷ ರೀತಿಯಲ್ಲಿ ಸಂದೇಶ ಬರೆದು ಬೇಗ ಗುಣಮುಖರಾಗುವಂತೆ ಕೋರಿಕೊಂಡಿದ್ದಾರೆ. ಅಕ್ರಮ್ ಟ್ವೀಟ್ ಭಾರತೀಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅಂದ್ಹಾಗೆ ಅಕ್ರಮ್ ಅವರು ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ನ ಬೌಲಿಂಗ್ ಕೋಚ್ ಆಗಿದ್ದರು.
ಏಪ್ರಿಲ್ 2ರಂದು ಭಾರತ ತಂಡ ಎರಡನೇ ಏಕದಿನ ವಿಶ್ವಕಪ್ ಗೆದ್ದು ಭರ್ತಿ 10 ವರ್ಷಗಳಾಗುತ್ತಿದೆ. 2011 ಏಪ್ರಿಲ್ 2ರಂದು ಟೀಮ್ ಇಂಡಿಯಾ ಫೈನಲ್ನಲ್ಲಿ ಶ್ರೀಲಂಕಾವನ್ನು ಸೋಲಿಸಿ ವಿಶ್ವಕಪ್ ಜಯಿಸಿತ್ತು. ಈ ವಿಶೇಷ ದಿನವನ್ನು ಸ್ಮರಿಸಿಕೊಂಡಿರುವ ಅಕ್ರಮ್, ಸಚಿನ್ಗೆ ಈ ಅವಿಸ್ಮರಣೀಯ ದಿನವನ್ನು ನೆನಪಿಸಿ ಅವರ ಆತ್ಮಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.
'ನೀನು 16ರ ಹರೆಯದವನಾಗಿದ್ದಾಗಲೂ ವಿಶ್ವದ ಅತ್ಯುತ್ತಮ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ್ದೀಯ. ಕೊರೊನಾ ವೈರಸ್ ಅನ್ನು ಕೂಡ ನೀನು ಸಿಕ್ಸ್ ಬಾರಿಸಿದಂತೆ ಹೊರಗಟ್ಟುತ್ತೀಯ ಅನ್ನೋದು ಗೊತ್ತು. ಬೇಗ ಗುಣಮುಖನಾಗು ಮಾಸ್ಟರ್. ಆಸ್ಪತ್ರೆಯಲ್ಲೇ ನೀನು ವೈದ್ಯರು, ಸಿಬ್ಬಂದಿಗಳ ಜೊತೆ 2011ರ ವಿಶ್ವಕಪ್ ವಿಜಯವನ್ನು ಸಂಭ್ರಮಿಸಿದರೆ ತುಂಬಾ ಚೆನ್ನಾಗಿರತ್ತೆ. ಅದನ್ನು ಸೆಲೆಬ್ರೇಟ್ ಮಾಡಿ ನನಗೆ ಚಿತ್ರಗಳನ್ನು ಕಳುಹಿಸು' ಎಂದು ಟ್ವಿಟರ್ನಲ್ಲಿ ಅಕ್ರಮ್ ಬರೆದುಕೊಂಡಿದ್ದಾರೆ.