ಟೋಕಿಯೋ, ಜುಲೈ 18: ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ಶನಿವಾರ ದೆಹಲಿಯಿಂದ ತೆರಳಿದ ಭಾರತೀಯ ಕ್ರೀಡಾಪಟುಗಳ ತಂಡ ಭಾನುವಾರ ಟೋಕಿಯೋದ ನರಿಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬಂದಿಳಿದಿದೆ. ಕುರ್ಬೆ ನಗರದ ಪ್ರತಿನಿಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ತಂಡವನ್ನು ಬರಮಾಡಿಕೊಂಡರು. 54 ಅಥ್ಲೀಟ್ಗಳು ಹಾಗೂ ಪೂರಕ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಪ್ರತಿನಿಧಿಗಳನ್ನೊಳಗೊಂಡ 88 ಸದಸ್ಯರ ತಂಡ ಇದಾಗಿದೆ.
ಶನಿವಾರ ರಾತ್ರಿ ಇಂದಿರಾಗಾಂಧೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ಯುವ ಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ತಂಡಕ್ಕೆ ಔಪಚಾರಿಕ ಬೀಳ್ಕೊಡುಗೆ ನೀಡಿ ಶುಭ ಕೋರಿದರು.
ಬ್ಯಾಡ್ಮಿಂಟನ್, ಬಿಲ್ಲುಗಾರಿಕೆ, ಹಾಕಿ, ಜುಡೋ, ಈಜು, ಭಾರ ಎತ್ತುವ ಸ್ಪರ್ಧೆ, ಜಿಮ್ನಾಸ್ಟಿಕ್ಸ್ ಮತ್ತು ಟೆಬಲ್ ಟೆನಿಟ್ನಲ್ಲಿ ಪಾಲ್ಗೊಳ್ಳುವ 8 ಕ್ರೀಡೆಗಳ ಅಥ್ಲೀಟ್ ಗಳು ಮತ್ತು ಬೆಂಬಲ ಸಿಬ್ಬಂದಿ ಮೊದಲ ಬ್ಯಾಚ್ನಲ್ಲಿ ಟೋಕಿಯೋಗೆ ಪ್ರಯಾಣಿಸಿದ್ದಾರೆ. ಈ ಬಾರಿಯ ಒಲಿಂಪಿಕ್ಸ್ಗೆ ಭಾರತದಿಂದ ಒಟ್ಟು 127 ಅಥ್ಲೀಟ್ಗಳು ಭಾಗವಹಿಸುತ್ತಿದ್ದಾರೆ. ಭಾರತದ ಇತಿಹಾಸದಲ್ಲಿ ಒಲಿಂಪಿಕ್ಸ್ ಗೆ ತೆರಳಿದ ಭಾರತದ ಅತಿ ದೊಡ್ಡ ಕ್ರೀಡಾಪಟುಗಳ ತಂಡ ಇದಾಗಿದೆ.
ಬರ್ತ್ ಡೇ ಗರ್ಲ್ ಸ್ಮೃತಿ ಮಂಧಾನರ 3 ಅಪರೂಪದ ದಾಖಲೆಗಳಿವು!
ಇನ್ನು ಈ ಕ್ರೀಡಾಪಟುಗಳ ತಂಡ ಟೋಕಿಯೋಗೆ ಪ್ರಯಾಣ ಬೆಳೆಸುವ ಮುನ್ನ ಭಾರತ ಸರ್ಕಾರದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಕ್ರೀಡಾಪಟುಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅನುರಾಗ್ ಠಾಕೂರ್ "ಟೋಕಿಯೋ ಒಲಿಂಪಿಕ್ಸ್ 2020 ದೇಶಕ್ಕೆ ಒಂದು ಸ್ಮರಣಾರ್ಹ ಸಂದರ್ಭವಾಗಿದೆ 135 ಕೋಟಿ ಜನರ ಶುಭ ಹಾರೈಕೆ ಪಾಲ್ಗೊಳ್ಳುತ್ತಿರುವ ಎಲ್ಲ ಕ್ರೀಡಾಪಟುಗಳ ಮೇಲಿದೆ ಎಂದು ಶುಭಹಾರೈಸಿದರು.
"ಈ ಶ್ರೇಷ್ಠ ಅವಕಾಶ ಪಡೆದ ಆಯ್ದ ಕೆಲವೇ ಕೆಲವರಲ್ಲಿ ನೀವೂ ಸೇರಿದ್ದೀರಿ, ನೀವು ಜೀವನದಲ್ಲಿ ಇನ್ನೂ ದೂರ ಸಾಗಬೇಕಾಗಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಲಹೆ ಮಾಡಿರುವಂತೆ ಒತ್ತಡಕ್ಕೆ ಒಳಗಾಗದೆ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಿ. ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವಾಗ ಅಥ್ಲೀಟ್ ಗಳು ಸದೃಢರಾಗಿರಬೇಕು, ಇದು ತಂತ್ರಗಾರಿಕೆ ಆಧರಿಸಿರುವಂತಹುದು ಮತ್ತು ಅಂತಿಮವಾಗಿ ಮನೋಬಲದ ಸಮರ, ಇದು ಅವರ ಪ್ರದರ್ಶನದಲ್ಲಿ ಪ್ರತಿಬಿಂಬಿತವಾಗುತ್ತದೆ" ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿಕೆ ನೀಡಿದ್ದಾರೆ.