
ಬೆಂಗಳೂರು: ಆಗಸ್ಟ್ 21ರಂದು ಕರ್ನಾಟಕದ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಓಣಂ ಹಬ್ಬ ಆಚರಿಸಲಾಗಿದೆ. ಕೇರಳದ ಮಲೆಯಾಳಿಗಳು ವಿಶೇಷವಾಗಿ ಆಚರಿಸುವ ಈ ಹಬ್ಬಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ), ರಾಜಸ್ಥಾನ್ ರಾಯಲ್ಸ್ (ಆರ್ಆರ್) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಅಭಿಮಾನಿಗಳಿಗೆ ಶುಭ ಕೋರಿವೆ.
ಕೇರಳಿಗರು ಅಥವಾ ಮಲೆಯಾಳಿ ಸಮುದಾಯದವರು ಈ ಹಬ್ಬವನ್ನು ಹೆಚ್ಚು ಖುಷಿಯಿಂದ ಆಚರಿಸುತ್ತಾರೆ. ಸುಮಾರು 10 ದಿನಗಳ ಕಾಲ ನಡೆಯುವ ಈ ಹಬ್ಬ ಒಳ್ಳೆಯ ಫಸಲು ಮತ್ತು ಇಳುವರಿಗಾಗಿ ಆಚರಿಸಲಾಗುತ್ತದೆ. ನಮ್ಮಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸುವಷ್ಟೇ ಸಡಗರದಲ್ಲಿ ಕೇರಳಿಗರು, ಮಲೆಯಾಳಿಯರು ಓಣಂ ಆಚರಿಸುತ್ತಾರೆ.
ಓಣಂ ಹಬ್ಬದ ಶುಭಾಶಯ ಕೋರಿರುವ ಐಪಿಎಲ್ ಫ್ರಾಂಚೈಸಿಗಳಲ್ಲಿ ಆರ್ಸಿಬಿ ಗಮನ ಸೆಳೆದಿದೆ. ಆರಂಭಿಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್, ಬ್ಯಾಟ್ಸ್ಮನ್ ಸಚಿನ್ ಬೇಬಿ, ವಿಕೆಟ್ ಕೀಪರ್ ಮೊಹಮ್ಮದ್ ಅಝರುದ್ದೀನ್, ವಿಕೆಟ್ ಕೀಪರ್ ಕೋನ ಶ್ರೀಕಾರ್ ಭರತ್ ವಿಡಿಯೋದಲ್ಲಿ ಕಾಣಿಸಿಕೊಂಡು ವಿಶ್ ಮಾಡಿದ್ದಾರೆ.
ಮಾಜಿ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಕೂಡ ವಿಭಿನ್ನ ರೀತಿಯಲ್ಲಿ ಓಣಂ ವಿಶ್ ಮಾಡಿದೆ. ಎಲ್ಲಾ ಚೇಟನ್ಸ್ ಆ್ಯಂಡ್ ಚೇಚೀಸ್ ಶುಭಾಶಯಗಳು ಎಂದು ತಿಳಿಸಿದೆ. ಜೊತೆಗೆ ಕೇರಳದಲ್ಲಿ ಸಾಂಪ್ರದಾಯಿಕ ದೋಣಿ ಸ್ಪರ್ಧೆಯ ಚಿತ್ರವನ್ನೂ ಟ್ವೀಟ್ ಜೊತೆ ಹಾಕಿಕೊಂಡಿದೆ.
ಸಂಜು ಸ್ಯಾಮ್ಸನ್ ನಾಯಕರಾಗಿರುವ ರಾಜಸ್ಥಾನ್ ರಾಯಲ್ಸ್ ಕೂಡ ಕೇರಳದ ಹುಲಿವೇಷದ ಚಿತ್ರದೊಂದಿಗೆ ಓಣಂ ಶುಭಾಶಯ ತಿಳಿಸಿದೆ. ಆರ್ಆರ್ ನಾಯಕ ಸಂಜು ತನ್ನ ಹೆಂಡತಿ ಮತ್ತು ಪೂಕಳಂ ಚಿತ್ರದೊಂದಿಗೆ ಶುಭಾಶಯ ತಿಳಿಸಿದ್ದಾರೆ. ಇನ್ನು ಕನ್ನಡಿಗ ಕೆಎಲ್ ರಾಹುಲ್, ರವೀಂದ್ರ ಜಡೇಜಾ, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಅನೇಕರು ಹಬ್ಬದ ಶುಭಾಶಯ ತಿಳಿಸಿದ್ದಾರೆ.