
ತಮಾಷೆ ಹೋಗಿ ಅಮಾಸೆಯಾಗಿದ್ದ ಕ್ಷಣ ನೆನೆದ ಅಖ್ತರ್
ಪಾಕಿಸ್ತಾನ ಮತ್ತು ಭಾರತೀಯ ಕ್ರಿಕೆಟ್ ತಂಡಗಳ ಆಟಗಾರರು ಈಗಲೂ ಪರಸ್ಪರ ಆತ್ಮೀಯ ಭಾವ ಇಟ್ಟುಕೊಂಡವರಿದ್ದಾರೆ. ಪಾಕ್ ದಂತಕತೆಗಳು ಭಾರತ-ಪಾಕಿಸ್ತಾನ ಮುಖಾಮುಖಿಯ ದಿನಗಳನ್ನು ಸ್ಮರಿಸಿ ವಿಚಾರಗಳನ್ನು ಹರವಿಕೊಳ್ಳೋದೂ ಇದೆ. ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಎರಡೂ ತಂಡಗಳು ಆಡುತ್ತಿದ್ದಾಗಿನ ಒಂದು ಗಮ್ಮತ್ತಿನ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ. ಸ್ಪೋರ್ಟ್ಸ್ಕೀಡಾ ಜೊತೆಗಿನ ಸಂವಾದದ ವೇಳೆ ಅಖ್ತರ್ 2007ರ ವೇಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಆವತ್ತು ಪ್ರಶಸ್ತಿ ವಿತರಣಾ ಸಮಾರಂಭಕ್ಕಾಗಿ ಎರಡೂ ತಂಡಗಳ ಆಟಗಾರರು ಒಂದೇ ಕಡೆ ಸೇರಿದ್ದರಂತೆ. ಆಗ ತಮಾಷೆಗಾಗಿ ಅಖ್ತರ್ ಅವರು ಸಚಿನ್ ಅವರನ್ನು ಮೇಲಕ್ಕೆತ್ತಿದ್ದರಂತೆ. ಸಚಿನ್ ಆಗ ಆಯತಪ್ಪಿ ಬಿದ್ದು ಬಿಟ್ಟಿದ್ದರು. ಆ ಕ್ಷಣ ಏನೆಲ್ಲ ಆಯಿತು ಅನ್ನೋದನ್ನು ಅಖ್ತರ್ ವಿವರಿಸಿದ್ದಾರೆ.

ಅಭಿಮಾನಿಗಳು ನನ್ನನ್ನು ಸುಡುತ್ತಾರೆ ಅಂದುಕೊಂಡಿದ್ದೆ
"ಪಾಕಿಸ್ತಾನ ಬಿಟ್ಟರೆ ನಾನು ತುಂಬಾ ಪ್ರೀತಿ ಪಡೆಯುತ್ತಿರುವ ಒಂದು ದೇಶವಿದ್ದರೆ ಅದು ಭಾರತ. ಭಾರತಕ್ಕೆ ಭೇಟಿಯಾದಾಗಿನ ಒಳ್ಳೊಳ್ಳೆ ನೆನಪುಗಳು ನನ್ನಲ್ಲಿವೆ. 2007 ಪ್ರವಾಸದ ಸಮಯದಲ್ಲಿ, ಒಂದು ಪ್ರಶಸ್ತಿ ವಿತರಣಾ ಸಮಾರಂಭವಿತ್ತು. ಹೀಗಾಗಿ ಸಹಜವಾಗೇ ಅಲ್ಲೊಂದು ಗೆಟ್ ಟುಗೇದರ್ ರೀತಿಯ ಕಾರ್ಯಕ್ರಮವಿತ್ತು. ಹೆಚ್ಚಾಗಿ ನಾನು ತರ್ಲೆ ತಮಾಷೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ. ಈ ಬಾರಿ ಕೂಡ ನಾನು ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸಿದೆ. ಹಾಗಾಗಿ, ನಾನು ಮೋಜಿಗಾಗಿ ಸಚಿನ್ ತೆಂಡೂಲ್ಕರ್ ಅವರನ್ನು ಮೇಲೆತ್ತಲು ಪ್ರಯತ್ನಿಸಿದೆ. ನಾನು ಅವರನ್ನು ಎತ್ತುವಲ್ಲಿ ಯಶಸ್ವಿಯಾದೆ ಆದರೆ ನಂತರ ಅವರು ನನ್ನ ಕೈಯಿಂದ ಜಾರಿಬಿಟ್ಟರು. ತೆಂಡೂಲ್ಕರ್ ಅವರು ನನ್ನ ಕೈ ಜಾರಿ ಕೆಳಗೆ ಬಿದ್ದರು, ಆದರೆ ತುಂಬಾ ಗಂಭೀರವೆನ್ನುವಂತ ಗಾಯವೇನೂ ಆಗಿರಲಿಲ್ಲ. ಆದರೆ ನಾನು 'ನಾನು ಸತ್ತುಬಿಟ್ಟೆ' ಎಂದು ನನ್ನೊಳಗೆ ಯೋಚಿಸಿದೆ. ಆ ತಮಾಷೆಯಿಂದಾಗಿ ಸಚಿನ್ ತೆಂಡೂಲ್ಕರ್ ಏನಾದರೂ ಅನ್ಫಿಟ್ ಅನ್ನಿಸಿದ್ದರೆ ಅಥವಾ ಗಂಭೀರ ಗಾಯಗೊಂಡರೆ, ಇನ್ನು ಯಾವತ್ತೂ ಭಾರತೀಯ ವೀಸಾ ಪಡೆಯಲಾಗುವುದಿಲ್ಲ ಎಂದು ನಾನು ಹೆದರಿದ್ದೆ. ಭಾರತೀಯರು ನನ್ನನ್ನು ದೇಶಕ್ಕೆ ಮರಳಲು ಎಂದಿಗೂ ಅನುಮತಿಸುವುದಿಲ್ಲ ಅಥವಾ ನನ್ನನ್ನು ಜೀವಂತವಾಗಿ ಸುಡುತ್ತಾರೆ ಎಂದು ಅಂದುಕೊಂಡಿದ್ದೆ," ಎಂದು ಅಖ್ತರ್ ಹೇಳಿಕೊಂಡಿದ್ದಾರೆ.

ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ನನ್ನನ್ನು ಪ್ರಶ್ನಿಸಿದ್ದರು
ಆಮೇಲೇನಾಯ್ತು ಎಂದು ವಿವರಿಸಿದ ಅಖ್ತರ್, ಹಾಗೆ ಬಿದ್ದ ಬಳಿಕವೂ ಸಚಿನ್ ಚೆನ್ನಾಗೇ ಇದ್ದರು. ಆ ಬಳಿಕ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಸಚಿನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು ಎಂದಿದ್ದಾರೆ. "ಸಚಿನ್ ಬಿದ್ದಾಗ ನನ್ನ ಕತೆ ಮುಗಿಯಿತು ಎಂದು ನಾನು ಭಾವಿಸಿದ್ದೆ. ಆ ಜಾಗದಲ್ಲಿ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಕೂಡ ಇದ್ದರು. ಅವರು ನನ್ನಲ್ಲಿ, 'ಏನು ಮಾಡಿದೆ ಮಾರಾಯಾ?,' ಎಂದು ಪ್ರಶ್ನಿಸಿದ್ದರು. ಆಗ ನಾನು, 'ಏನಾಯ್ತೋ ನಂಗೆ ನಿಜಕ್ಕೂ ಗೊತ್ತಿಲ್ಲ. ಅಚಾನಕ್ ಆಗಿ ಹೀಗಾಯ್ತು,' ಎಂದು ಪ್ರತಿಕ್ರಿಯಿಸಿದ್ದೆ. ಆ ಬಳಿಕ ನಾನು ಸಚಿನ್ ಅವರನ್ನು ಅಪ್ಪಿಕೊಂಡೆ, ಏನೂ ತೊಂದರೆಯಾಗಿಲ್ಲ ಅಲ್ಲವೆ ಎಂದು ವಿಚಾರಿಸಿದರೆ. ಅದೃಷ್ಟವಶಾತ್ ಸಚಿನ್ 'ಏನೂ ಆಗಿಲ್ಲ, ನಾನು ಚೆನ್ನಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು," ಎಂದು ಅಖ್ತರ್ ವಿವರಿಸಿದ್ದಾರೆ.ರಾವಲ್ಪಿಂಡಿ ಎಂದು ಕರೆಯಲಾಗುವ ಶೋಯೆಬ್ ಅಖ್ತರ್ ಮತ್ತು ಸಚಿನ್ ಮುಖಾಮುಖಿಯೂ ಕುತೂಹಲ ಮೂಡಿಸುತ್ತಿತ್ತು. ಸಚಿನ್ ತನ್ನ ಎಸೆತಕ್ಕೆ ಹೆದರುತ್ತಿದ್ದರು ಎಂದು ಅಖ್ತರ್ ಈ ಮೊದಲು ಹೇಳಿಕೊಂಡಿದ್ದರು. ಆದರೆ ಅಖ್ತರ್ ವಿರುದ್ಧವೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ.

ಆಗ ಮಾತ್ರ ಸಚಿನ್ಗೆ ಸ್ವಲ್ಪ ಜಾಸ್ತಿ ಗಾಯ ಆಗಬಾರದಿತ್ತಾ ಅನ್ನಿಸಿತ್ತು
"ಆ ಬಳಿಕ ಸಚಿನ್ ಅವರಲ್ಲಿ ಮಾತನಾಡುವಾಗ ಈ ವಿಚಾರ ಹೇಳಿ ಒಂದು ವೇಳೆ ನಿಮಗೆ ಗಾಯವಾಗಿದ್ದೆ ನನ್ನ ಬದುಕಿಗೆ ತುಂಬಾ ಸಮಸ್ಯೆಯಾಗುತ್ತಿತ್ತು. ಮುಖ್ಯವಾಗಿ ಮಾಧ್ಯಮ ಮತ್ತು ಅಭಿಮಾನಿಗಳು ನನಗೆ ಬಹಳ ಸಮಸ್ಯೆ ನೀಡುತ್ತಿದ್ದರು ಎಂದು ಹೇಳಿದ್ದೆ. ಆ ಬಳಿಕ ಸಚಿನ್ ಸರಣಿಯೊಂದರಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಆ ವೇಳೆ ನನಗೆ ಅನ್ನಿಸಿತ್ತು ಛೆ, ಸಚಿನ್ಗೆ ಸ್ವಲ್ಪ ಜೋರೇ ಗಾಯವಾಗಬಾರದಿತ್ತ ಎಂದು,' ಎನ್ನುತ್ತಲೇ ಅಖ್ತರ್ ನಗು ಬೀರಿದರು. 45ರ ಹರೆಯದ ಅಖ್ತರ್ ಪಾಕಿಸ್ತಾನ ಪರ 46 ಟೆಸ್ಟ್ ಪಂದ್ಯಗಳಲ್ಲಿ 178 ವಿಕೆಟ್, 163 ಏಕದಿನ ಪಂದ್ಯಗಳಲ್ಲಿ 247 ವಿಕೆಟ್ ಮತ್ತು 15 ಟಿ20ಐ ಪಂದ್ಯಗಳಲ್ಲಿ 19 ವಿಕೆಟ್ ದಾಖಲೆ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಶೋಯೆಬ್ ಅಖ್ತರ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಮೂರು ಐಪಿಎಲ್ ಪಂದ್ಯಗಳಲ್ಲಿ 5 ವಿಕೆಟ್ ದಾಖಲೆ ಅಖ್ತರ್ ಹೆಸರಿನಲ್ಲಿದೆ. ವಿಶೇಷವೆಂದರೆ ಟೆಸ್ಟ್ನಲ್ಲಿ 544 ರನ್ ಬಾರಿಸಿರುವ ಅಖ್ತರ್ 53 ಫೋರ್ಸ್, 22 ಸಿಕ್ಸರ್ ಬಾರಿಸಿದ್ದಾರೆ. ಏಕದಿನದಲ್ಲಿ 394 ರನ್, 27 ಫೋರ್ಸ್, 12 ಸಿಕ್ಸರ್ ದಾಖಲೆ ಹೊಂದಿದ್ದಾರೆ. ಕೆಕೆಆರ್ ಅಲ್ಲದೆ ಏಷ್ಯಾ XI, ಐಸಿಸಿ ವರ್ಲ್ಡ್ XI, ಸಚಿನ್ ಬ್ಲಾಸ್ಟರ್ ತಂಡಗಳ ಪರವೂ ಆಡಿದ್ದಾರೆ.


Click it and Unblock the Notifications












