
ಸೋಲಿನ ರುಚಿ ತೋರಿಸಿದ ಆರ್ಆರ್
ಆರ್ಸಿಬಿ ಹಸಿರು ಜೆರ್ಸಿ ಆಡಿದಾಗ ಸೋತಿದ್ದು ಕಡಿಮೆ. ಹಸಿರು ಜರ್ಸಿ ಆರ್ಸಿಬಿ ಪಾಲಿಗೆ ಲಕ್ಕಿ ಎಂದೇ ಹೇಳಲಾಗುತ್ತಿತ್ತು. ಕಳೆದ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿ ಧರಿಸಿ ಆಡಿ ಸೋಲು ಕಂಡಿತ್ತು. ಈ ಬಾರಿ ಆರ್ಸಿಬಿಯದ್ದೇ ಗೆಲುವು ಎಂದು ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದರು. RIP ರಾಜಸ್ಥಾನ ರಾಯಲ್ಸ್ ಎಂಬ ಮೀಮ್ಗಳನ್ನೂ ಸೃಷ್ಟಿಸಿದ್ದರು. ಅಷ್ಟರಮಟ್ಟಿಗೆ ಹಸಿರು ಜೆರ್ಸಿ ಆರ್ಸಿಬಿ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿತ್ತು.

ಪ್ರಕೃತಿ ದೇವತೆಗೆ ಗೌರವ!
ಈಗ ಆರ್ಸಿಬಿ ಅಭಿಮಾನಿಗಳು ಮತ್ತೆ ದೇವತೆಯ ಮೊರೆ ಹೋಗಿದ್ದಾರೆ. ಈ ಮ್ಯಾಚ್ ಪ್ರಕೃತಿ ದೇವತೆಗೆ ಅರ್ಪಣೆ ಎಂದು ತಮ್ಮನ್ನು ತಾವು ಸಂತೈಸಿಕೊಂಡಿದ್ದಾರೆ.
ಜತೆಗೆ ಫೇಸ್ಬುಕ್, ಟ್ವಿಟ್ಟರ್ಗಳಲ್ಲಿ ಸಾಕಷ್ಟು ಮೀಮ್ಗಳನ್ನು ಸೃಷ್ಟಿಸಿ ಹಂಚಿಕೊಳ್ಳುತ್ತಿದ್ದಾರೆ.
ಹಸಿರು ದಿರಿಸಿನ ಮೇಲೆ ನೀಲಿ ಸವಾರಿ!
ಹಸಿರು ಜೆರ್ಸಿ ಧರಿಸುವ ಕ್ರಿಕೆಟ್ ತಂಡ ಯಾವಾಗಲೂ ನೀಲಿ ಧಿರಿಸಿನ ತಂಡಕ್ಕೆ ಸೋಲುವುದು ಎಲ್ಲರಿಗೂ ಗೊತ್ತಿರುವಂಥದ್ದೇ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಪಾಕಿಸ್ತಾನದ ಜೆರ್ಸಿ ಮತ್ತು ಅಜಿಂಕ್ಯಾ ರಹಾನೆ ಭಾರತದ ಜೆರ್ಸಿ ಹಾಕಿಕೊಂಡಿರುವಂತೆ ಫೋಟೊ ಎಡಿಟ್ ಮಾಡಲಾಗಿದೆ.
ಮೊನ್ನೆ ಹೀರೊ, ಇಂದು ವಿಲನ್
ಕೆಕೆಆರ್ ತಂಡದಲ್ಲಿರುವ ಕರ್ನಾಟಕದ ಆಟಗಾರ ವಿನಯ್ ಕುಮಾರ್ ಬೌಲಿಂಗ್ಅನ್ನು ನೆನೆಸಿಕೊಂಡಿರುವ ಟ್ವಿಟ್ಟಿಗರು, ವಿನಯ್ ಕುಮಾರ್ ತಮ್ಮ ವಾಟ್ಸ್ಆಪ್ ಗ್ರೂಪ್ಗೆ ಉಮೇಶ್ ಯಾದವ್ ಅವರನ್ನು ಸೇರಿಸಿಕೊಂಡಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.
ಉಮೇಶ್ ಯಾದವ್ ಎರಡು ದಿನಗಳ ಹಿಂದಷ್ಟೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೂರು ವಿಕೆಟ್ಗಳನ್ನು ಒಂದೇ ಓವರ್ನಲ್ಲಿ ಕಿತ್ತು ಹೀರೊ ಆಗಿದ್ದರು. ಆದರೆ, ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್ಗೆ 59 ರನ್ ನೀಡಿದ್ದಕ್ಕೆ ಟ್ರಾಲ್ಗೆ ಒಳಗಾಗಿದ್ದಾರೆ.
ಸರ್ಫ್ರಾಜ್ ಖಾನ್ ಬೇಕಾಗಿತ್ತೇ?
ಸಿಎಸ್ಕೆ ವಿರುದ್ಧ ಕೆ.ಎಲ್. ರಾಹುಲ್ ಮತ್ತು ಕ್ರಿಸ್ ಗೇಲ್ ಅಬ್ಬರಿಸಿದ ರೀತಿ ಕಂಡ ಆರ್ಸಿಬಿ ಅಭಿಮಾನಿಗಳು ತಂಡ ಮಾಲೀಕತ್ವದ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಸರ್ಫ್ರಾಜ್ ಖಾನ್ ಬದಲು ರಾಹುಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಿತ್ತು ಎನ್ನುವುದು ಅಭಿಮಾನಿಗಳ ಅಭಿಪ್ರಾಯ.
ರಾಹುಲ್ ಬದಲು ಸರ್ಫ್ರಾಜ್ ಖಾನ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದು ತಮಾಷೆ ಎನಿಸಿತ್ತು. ಇಂದಿನ ಪಂದ್ಯದಲ್ಲಿ ಪವನ್ ನೇಗಿಯನ್ನು ಆಡಿಸಲು ಸರ್ಫ್ರಾಜ್ ಖಾನ್ ಅವರನ್ನು ಕೈಬಿಟ್ಟಿದ್ದು ಇನ್ನೂ ದೊಡ್ಡ ತಮಾಷೆಯಾಗಿ ಕಾಣಿಸಿದೆ.
ಕೆಲಸಕ್ಕಾಗಿ ಪರದಾಡುತ್ತಿರುವ ಪದವೀಧರ!
ಕೊಹ್ಲಿ, ಡಿ ಕಾಕ್, ಮೆಕಲಮ್, ಎಬಿ ಡಿವಿಲಿಯರ್ಸ್ ಅವರಂತಹ ಆಟಗಾರರನ್ನು ಹೊಂದಿದ್ದು ರನ್ ಚೇಸ್ ಮಾಡಲು ಸಾಧ್ಯವಾಗದೆ ಇರುವುದು ಐಐಎಂನಲ್ಲಿ ಪದವಿ ಮುಗಿಸಿ ಇನ್ನೂ ಕೆಲಸ ಹುಡುಕಲು ಪರದಾಡುತ್ತಿರುವಂತೆ ಎಂದು ಲೇವಡಿ ಮಾಡಿದ್ದಾರೆ.


Click it and Unblock the Notifications











